ಮತಾಂತರ ನಿಷೇಧ ಕಾಯ್ದೆ ಸಂವಿಧಾನ ವಿರೋಧಿ ನಡೆ: ದಲಿತ ಹಕ್ಕುಗಳ ಸಮಿತಿ ಅಧ್ಯಕ್ಷ ಶೇಖರ್ ಅಭಿಪ್ರಾಯ
ಬೆಳ್ತಂಗಡಿ: ರಾಜ್ಯದ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಮತಾಂತರ ನಿಷೇಧ ಕಾಯ್ದೆ ಸಂವಿಧಾನ ವಿರೋಧಿಯಾದುದು. ಇದನ್ನು ತಕ್ಷಣ ಹಿಂಪಡೆದು ದೇಶದ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಬೇಕು ಎಂದು ದಲಿತ ಹಕ್ಕುಗಳ ಸಮಿತಿ ಅಧ್ಯಕ್ಷ ಶೇಖರ್ ಎಲ್ ಆಗ್ರಹಿಸಿದ್ದಾರೆ.
ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಮಸೂದೆ (ಮತಾಂತರ ನಿಷೇಧ ) ಸಂವಿಧಾನದ ಕಲಂ 25 ರ ಸ್ಪಷ್ಟ ಉಲ್ಲಂಘನೆಯಾಗಿದೆ. ಆದರೂ ಸಂವಿಧಾನ ವಿರೋಧಿಯಾಗಿರುವ ಮಸೂದೆ ಜಾರಿಗೆ ತಂದಿರುವ ರಾಜ್ಯ ಸರ್ಕಾರವನ್ನು ತಕ್ಷಣ ವಜಾ ಮಾಡುವ ಅಗತ್ಯವಿದೆ ಎಂದು ಒತ್ತಾಯಿಸಿದ ಅವರು ಪರಿಶಿಷ್ಟ ಜಾತಿ/ಪಂಗಡಗಳನ್ನು ಇಂದಿಗೂ ಜಾತಿಯ ಕಾರಣಕ್ಕಾಗಿ ಹಿಂದೂ ಧರ್ಮದ ಸಂಪ್ರದಾಯ , ಆಚರಣೆ ವಿಚಾರದಲ್ಲಿ ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಅದರ ಬಗ್ಗೆ ಯಾವುದೇ ಕಠಿಣ ಮಸೂದೆ, ಕಾನೂನುಗಳನ್ನು ರೂಪಿಸದ ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವ ಅಗತ್ಯ ಏನಿತ್ತು ಎಂದು ಪ್ರಶ್ನಿದ್ದಾರೆ. ನಾಯಿಗಳನ್ನು ಮನೆಯೊಳಗೆ ಸಾಕುವವರು ದಲಿತರನ್ನು ಮನೆ , ದೇವಸ್ಥಾನಗಳಿಗೆ ಪ್ರವೇಶ ನೀಡುತ್ತಿಲ್ಲ.
ಸಾರ್ವಜನಿಕ ಬಾವಿ , ಕೆರೆಯಿಂದ ನೀರು ತೆಗೆಯಲು ಬಿಡದ ನಮ್ಮ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆಗಿಂತ ಅಸ್ಪೃಶ್ಯತೆ ನಿಷೇಧ ಕಾಯ್ದೆ ಅನಿವಾರ್ಯವಿದೆ. ರಾಜ್ಯದಲ್ಲಿ ಬಲಾತ್ಕಾರ , ಬಲವಂತ , ಆಮಿಷ , ಮದುವೆ ವಿಚಾರದಲ್ಲಿ ಮತಾಂತರ ಮಾಡಿದ ಒಂದೇ ಒಂದು ಕೇಸ್ ದಾಖಲಾಗದಿದ್ದರೂ ನಾಗಪುರದ ಆದೇಶವನ್ನು ಪಾಲಿಸಲಾಗಿದೆ. ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರೇ ” ನಾನು ಹಿಂದೂವಾಗಿ ಹುಟ್ಟಿದ್ದೇನೆ , ಆದರೆ ಹಿಂದೂವಾಗಿ ಸಾಯಲ್ಲ” ಎಂದು ಬೌದ್ಧ ಧರ್ಮವನ್ನು ಸ್ವೀಕರಿಸಿರುವಾಗ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮತಾಂತರ ನಿಷೇಧ ಕಾಯ್ದೆ ಅಂಬೇಡ್ಕರ್ ವಿರೋಧಿಯಾಗಿದೆ. ಇದರಿಂದಾಗಿ ಅಮಾಯಕರ ಮೇಲೆ ಹಲ್ಲೆ , ದೌರ್ಜನ್ಯ ಮಿತಿಮೀರುವ ಸಾಧ್ಯತೆಯಿದೆ.
ಪೋಲಿಸ್ ಇಲಾಖೆ ಕೂಡ ಸುಳ್ಳು ದೂರಿನ ಆಧಾರದಲ್ಲಿ ಅಮಾಯಕರನ್ನು ಜೈಲಿಗಟ್ಟುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿರುವ ಶೇಖರ್ ಲಾಯಿಲ ಕ್ರೈಸ್ತ , ಮುಸ್ಲಿಂ ಸಮುದಾಯದವರು ಬಲವಂತ, ಆಮಿಷ ತೋರಿಸಿ ಮತಾಂತರ ಮಾಡಿದ ಕಾರಣಕ್ಕಾಗಿ ಆ ಸಮುದಾಯಗಳ ಜನಸಂಖ್ಯೆ ಎಷ್ಟು ಎಷ್ಟು ಶೇಕಡಾ ಹೆಚ್ಚಳವಾಗಿದೆ ಎಂಬ ಅಂಕಿಅಂಶಗಳನ್ನು ಬಹಿರಂಗಪಡಿಸಲಿ ಇಲ್ಲದಿದ್ದರೆ ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಯಲಿ ಎಂದು ಆಗ್ರಹಿಸಿದ ಅವರು ಇಲ್ಲದಿದ್ದರೆ ರಾಜ್ಯದಲ್ಲಿ ಸಂವಿಧಾನದ ಹಕ್ಕನ್ನು ಊರ್ಜಿತಗೊಳಿಸಲು ಎರಡನೇ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.




