ಹಿರೇಹಳ್ಳದ ರಸ್ತೆಯಲ್ಲಿ ನೀರಿನ ಹರಿವು ಜಾಸ್ತಿ ಇದ್ದರೂ ಲಾರಿ ಚಲಾಯಿಸಿದ ಚಾಲಕ: 3 ಟನ್ ಸಿಮೆಂಟ್ ನೀರುಪಾಲು, ಲಾರಿ ಚಾಲಕ ಪಾರು
ಯಾದಗಿರಿ: ಜಿಲ್ಲೆಯ ಶಹಾಪುರ ಠಾಣಾ ವ್ಯಾಪ್ತಿಯ, ವಡಗೇರಾ ತಾಲ್ಲೂಕಿನ ಮದರಕಲ್ ಗ್ರಾಮದ ಹಿರೇಹಳ್ಳದಲ್ಲಿ ಸಿಮೆಂಟ್ ಲಾರಿ ಶನಿವಾರ ಉರುಳಿ ಬಿದ್ದಿದೆ.
ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ಹಿರೇಹಳ್ಳದಲ್ಲಿ ನೀರು ಹರಿಯುತ್ತಿತ್ತು. ನೀರಿನ ಹರಿವು ಜಾಸ್ತಿ ಇದ್ದರೂ ಚಾಲಕ ಲಾರಿ ಚಲಾಯಿಸಿದ್ದರಿಂದ ಈ ಅನಾಹುತ ಸಂಭವಿಸಿದೆ. ಲಾರಿಯಲ್ಲಿದ್ದವರು ಟಾಪ್ ಮೇಲೆ ಕುಳಿತು ಪ್ರಾಣ ರಕ್ಷಣೆ ಮಾಡಿಕೊಂಡಿದ್ದಾರೆ. ನಂತರ ಸಂಬಂಧಿಸಿದವರಿಗೆ ಕರೆ ಮಾಡಿದ್ದಾರೆ.
ಲಾರಿಯಲ್ಲಿ 3 ಟನ್ ಸಿಮೆಂಟ್ ಇತ್ತು ಎನ್ನಲಾಗಿದೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನಿಂದ ಬೆಳಗಾವಿಗೆ ಸಿಮೆಂಟ್ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಚಾಲಕನನ್ನು ರಕ್ಷಣೆ ಮಾಡಿದ್ದಾರೆ.




