ಶಿಕ್ಷಕನಿಂದ ಮಾರಣಾಂತಿಕ ಹಲ್ಲೆ: 13 ವರ್ಷದ ಮತ್ತೋರ್ವ ದಲಿತ ಬಾಲಕ ಮೃತ್ಯು
ಬಹರಾಯಿಚ್: ಉತ್ತರ ಪ್ರದೇಶದ ಬಹರಾಯಿಚ್ನಲ್ಲಿ ಶಿಕ್ಷಕನಿಂದ ತೀವ್ರವಾಗಿ ಹಲ್ಲೆಗೊಳಗಾಗಿ, 9 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 13 ವರ್ಷದ ಬಾಲಕನೊಬ್ಬ ಶುಕ್ರವಾರ ಮೃತಪಟ್ಟಿದ್ದಾನೆ.
ತೀವ್ರವಾಗಿ ಹಲ್ಲೆಗೀಡಾಗಿದ್ದ ಬಾಲಕನಿಗೆ ತೀವ್ರ ಆಂತರಿಕ ರಕ್ತಸ್ರಾವ ಉಂಟಾಗಿತ್ತು ಎಂದು ಹೇಳಲಾಗಿದೆ.
ಮೃತ ಬಾಲಕನ ಅಣ್ಣ ರಾಜೇಶ್ ವಿಶ್ವಕರ್ಮ ಸುದ್ದಿಗಾರರೊಂದಿಗೆ ಮಾತನಾಡಿ, ‘ಮಾಸಿಕ ಶಾಲಾ ಶುಲ್ಕವಾದ ₹250 ನೀಡಲಿಲ್ಲ ಎಂಬ ಕಾರಣಕ್ಕೆ ಶಿಕ್ಷಕ ನನ್ನ ತಮ್ಮನ ಮೇಲೆ ಹಲ್ಲೆ ಮಾಡಿದ್ದಾರೆ. ಆದರೆ, ಶಾಲಾ ಶುಲ್ಕವನ್ನು ನಾನು ಆನ್ಲೈನ್ನಲ್ಲಿ ಪಾವತಿಸಿದ್ದೆ. ಇದು ತಿಳಿಯದ ಶಿಕ್ಷಕ ನನ್ನ ತಮ್ಮನ್ನನ್ನು ಅಮಾನುಷವಾಗಿ ಹೊಡೆದಿದ್ದಾರೆ’ ಎಂದು ಆರೋಪಿಸಿದ್ದಾರೆ.
ಸಿರ್ಸಿಯಾ ಠಾಣೆ ಪೊಲೀಸರಿಗೆ ಇದೀಗ ಮೃತ ಬಾಲಕನ ಚಿಕ್ಕಪ್ಪ ದೂರು ನೀಡಿದ್ದಾರೆ.
ಹಲ್ಲೆ ಮಾಡಿದ ಶಿಕ್ಷಕ ಮೇಲ್ಜಾತಿಗೆ ಸೇರಿದವರಾಗಿದ್ದು, ದಲಿತ ಎಂಬ ಕಾರಣಕ್ಕೆ ನಮ್ಮ ಮಗನನ್ನು ಥಳಿಸಿದ್ದಾರೆ ಎಂದು ಬಾಲಕನ ಕುಟುಂಬಸ್ಥರು ಆರೋಪಿಸಿದ್ದು, ಪ್ರಕರಣವು ಜಾತಿ ಬಣ್ಣ ಪಡೆದುಕೊಂಡಿದೆ.




