ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾಗಿ ಮಂಗಳೂರಿನ ಸಿರಾಜುದ್ದೀನ್ ಎ. ಆಯ್ಕೆ
ಮಂಗಳೂರು: ಮಂಗಳೂರಿನಲ್ಲಿ 16 ವರ್ಷಗಳಿಂದ ವಕೀಲರಾಗಿ ಗುರುತಿಸಿಕೊಂಡಿದ್ದ ಸಿರಾಜುದ್ದೀನ್ ಎ. ಅವರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ನಿವಾಸಿಯಾಗಿರುವ ಸಿರಾಜುದ್ದೀನ್, ಮಂಗಳೂರಿನಲ್ಲಿ ಖ್ಯಾತ ಕ್ರಿಮಿನಲ್ ವಕೀಲ ಅರುಣ್ ಬಂಗೇರ ಅವರ ಜೂನಿಯರ್ ಆಗಿ ವಕೀಲಿ ವೃತ್ತಿ ನಡೆಸುತ್ತಿದ್ದರು. ಕಳೆದ ಹಲವು ವರ್ಷಗಳಿಂದ ಅವರು ನ್ಯಾಯಾಧೀಶರ ಹುದ್ದೆಗಾಗಿ ಪರೀಕ್ಷೆ ಬರೆಯುತ್ತಿದ್ದರು. ಏಳನೇ ಬಾರಿಯ ಪ್ರಯತ್ನದಲ್ಲಿ ಸಫಲತೆ ಕಂಡಿದ್ದಾರೆ. ಕಳೆದ ನವೆಂಬರ್ ನಲ್ಲಿ ಜಡ್ಜ್ ಹುದ್ದೆಗೆ ಅರ್ಜಿ ಕರೆಯಲಾಗಿತ್ತು. ಆನಂತರ ಫೆಬ್ರವರಿಯಲ್ಲಿ ಲಿಖಿತ ಪರೀಕ್ಷೆ, ಎಪ್ರಿಲ್, ಮೇ ತಿಂಗಳಲ್ಲಿ ವೈವಾ ಸಂದರ್ಶನ ಇತ್ಯಾದಿ ಹಂತಗಳಿದ್ದವು.
ಆಗಸ್ಟ್ 3 ರಂದು ಇಡೀ ರಾಜ್ಯದಲ್ಲಿ ಏಳು ಮಂದಿ ಜಿಲ್ಲಾ ನ್ಯಾಯಾಧೀಶ ಹುದ್ದೆಗೆ ಆಯ್ಕೆಯಾಗಿದ್ದಾರೆಂದು ಹೈಕೋರ್ಟ್ ಪ್ರಕಟಣೆ ಹೊರಡಿಸಿದೆ. ಏಳು ಮಂದಿಯಲ್ಲಿ ಗಂಗಾಧರ ಈರಪ್ಪ ಪಾಟೀಲ್, ಸುಮಂಗಲ ಚಕಲಬ್ಬಿ, ಮಧು ಎನ್.ಆರ್., ಆನಂದ, ಸಿರಾಜುದ್ದೀನ್, ಸರಿತಾ ಡಿ, ಮಾಯಣ್ಣ ಬಿಎಲ್ ಅವರ ಹೆಸರು ಇದೆ. 21 ಜಡ್ಜ್ ಹುದ್ದೆಗಳ ನೇರ ನೇಮಕಾತಿಗಾಗಿ ಆನ್ಲೈನಲ್ಲಿ ಅರ್ಜಿ ಕರೆಯಲಾಗಿತ್ತು. ಮಾರ್ಕ್ ಮತ್ತು ಮೆರಿಟ್ ಆಧಾರದಲ್ಲಿ ಏಳು ಮಂದಿಯನ್ನು ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಆಯ್ಕೆ ಮಾಡಿದ್ದಾಗಿ ನೋಟಿಫಿಕೇಶನ್ ಹೊರಡಿಸಿದೆ.
ಸಾಮಾನ್ಯ ಕೃಷಿ ಕುಟುಂಬದ ಸಿರಾಜುದ್ದೀನ್ ಉಪ್ಪಿನಂಗಡಿ ಬಳಿಯ ಇಳಂತಿಲ ನಿವಾಸಿಯಾಗಿದ್ದು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಕಾನೂನು ಪದವಿ ಪೂರೈಸಿದ್ದರು. ನಾಲ್ಕು ಸೋದರರು, ಇಬ್ಬರು ಸೋದರಿಯರ ಕುಟುಂಬದಲ್ಲಿ ಸಿರಾಜುದ್ದೀನ್ ಮೊದಲ ಬಾರಿಗೆ ಸರಕಾರಿ ಹುದ್ದೆ, ಅದರಲ್ಲೂ ಜಿಲ್ಲೆಯ ಅತ್ಯುನ್ನತ ಹುದ್ದೆಗೇರಿದ್ದಾರೆ. ಸಿರಾಜುದ್ದೀನ್ ಸದ್ಯ ಮಂಗಳೂರಿನಲ್ಲಿ ನೆಲೆಸಿದ್ದು, ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಈ ಬಾರಿ ಒಬ್ಬರಷ್ಟೇ ಜಡ್ಜ್ ಹುದ್ದೆಗೆ ಆಯ್ಕೆಯಾಗಿದ್ದಾರೆ. ಸದ್ಯಕ್ಕೆ ಆಯ್ಕೆ ಪ್ರಕಟಣೆಯಷ್ಟೇ ಆಗಿದ್ದು, ಯಾವ ಜಿಲ್ಲೆಗೆ ನೇಮಕಾತಿ ಆಗುತ್ತದೆ ಅನ್ನುವುದು ಇನ್ನಷ್ಟೇ ಆಗಬೇಕಿದೆ.





