ಸುಳ್ಯ: ಉಕ್ಕಿ ಹರಿಯುತ್ತಿರುವ ಪಯಸ್ವಿನಿ: ಮೈಸೂರು-ಮಂಗಳೂರು ಹೆದ್ದಾರಿ ಬಂದ್
ಮಂಗಳೂರು: ಭಾರಿ ಮಳೆಯಿಂದಾಗಿ ಸುಳ್ಯ ತಾಲ್ಲೂಕಿನಲ್ಲಿ ಪಯಸ್ವನಿ ಉಕ್ಕಿ ಹರಿಯುತ್ತಿರುವುದರಿಂದ ಮೈಸೂರು-ಮಂಗಳೂರು ಹೆದ್ದಾರಿ ಬಂದ್ ಆಗಿದೆ.


ಸುಳ್ಯ ತಾಲ್ಲೂಕಿನ ಪೇರಾಜೆ ಹಾಗೂ ಆರಂಬೂರು ಬಳಿ ಹೆದ್ದಾರಿಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತಿರುವುದರಿಂದ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ನೂರಾರು ವಾಹನಗಳು ರಸ್ತೆಯಲ್ಲಿ ಸಿಲುಕಿವೆ.
ಮುಂಜಾವು 3 ಗಂಟೆಯ ನಂತರ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ಪೇರಾಜೆ ಬಿಳಿಯೂರು ಬಳಿ ಹೆದ್ದಾರಿಯಲ್ಲಿ ನೀರಿನಲ್ಲಿ ರಾಜಹಂಸ ಬಸ್ ಸಿಲುಕಿಹಾಕಿಕೊಂಡು ಆತಂಕ ಸೃಷ್ಟಿಸಿತು.
ಬಸ್ ನಲ್ಲಿ ಒಂಬತ್ತು ಮಂದಿ ಪ್ರಯಾಣಿಕರಿದ್ದರು. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಸ್ಥಳೀಯರ ನೆರವಿನಿಂದ ಬೋಟನ್ನು ಬಸ್ ಬಳಿ ತೆಗೆದುಕೊಂಡು ಹೋಗಿ ಒಂಬತ್ತು ಪ್ರಯಾಣಿಕರನ್ನು ಸುರಕ್ಷಿತವಾಗಿ ಎತ್ತರದ ಜಾಗಕ್ಕೆ ಕರೆದೊಯ್ದರು.
ಆರು ಗಂಟೆಯ ಹೊತ್ತಿಗೆ ನೀರಿನ ಮಟ್ಟ ಕಡಿಮೆಯಾದ ಬಳಿಕ ಬಸ್, ಲಾರಿಗಳು ಸೇರಿದಂತೆ ದೊಡ್ಟ ವಾಹನಗಳು ಸಂಚಾರ ಆರಂಭಿಸಿದವು. ಎರಡು ಕಿ.ಮೀ ಮುಂದೆ ಆರಂಬೂರುಯಲ್ಲಿ ಹೆದ್ದಾರಿಯಲ್ಲಿ ನೀರು ಹರಿಯುತ್ತಿದ್ದು, ವಾಹನಗಳ ಓಡಾಟಕ್ಕೆ ತೊಂದರೆಯಾಗಿದೆ. ನದಿಯ ಬಳಿ ಇರುವ ಮನೆಯೊಂದು ಸಂಪೂರ್ಣ ಜಲಾವೃತವಾಗಿದೆ. ನಸುಕು ಮೂರು ಗಂಟೆಯಿಂದ ರಸ್ತೆಯಲ್ಲಿ ನೀರು ಹರಿಯುತ್ತಿದ್ದು, ವಾಹನಗಳ ಸಂಚಾರ ಸ್ಥಗಿತಗೊಂಡಿದೆ.




