3 ದಿನಕ್ಕೆ 15 ಸಾವಿರ ರೂಪಾಯಿಗೆ ಬಾಡಿಗೆಗೆ ಕಾರು ನೀಡಿದ್ದ ಆರೋಪಿ ಅಜೀತ್ ಕ್ರಾಸ್ತಾ: ಫಾಝಿಲ್ ಗಾಗಿ ಜಂಕ್ಷನ್ ನಲ್ಲೇ ಓಡಾಡಿದ್ದ ಆರೋಪಿಗಳು
ಸುರತ್ಕಲ್: ಜುಲೈ 28ರಂದು ಕಾರಿನಲ್ಲಿ ಬಂದು ಫಾಝಿಲ್ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿತ್ತು. ಡಿಸಿಪಿ ಅನ್ಶು ಕುಮಾರ್ ನೇತೃತ್ವದಲ್ಲಿ ಏಳೆಂಟು ತಂಡದಲ್ಲಿ ತನಿಖೆ ಮಾಡಲಾಗಿತ್ತು. ಹತ್ಯೆಗೆ ಬಳಿಸಿದ ಇಯಾನ್ ಕಾರಿನ ಮಾಲಕನಿಂದ ಆರೋಪಿಗಳ ಮಾಹಿತಿ ಸಿಕ್ಕಿತು. ಹೆಚ್ಚು ಹಣದಾಸೆಗೆ ಅಜಿತ್ ಕ್ರಾಸ್ತಾ ಕಾರು ನೀಡಿದ್ದ. ಮೂರು ದಿನಕ್ಕೆ ಹದಿನೈದು ಸಾವಿರ ಕೊಡುವುದಾಗಿ ಆರೋಪಿಗಳು ಹೇಳಿದ್ದರು ಎಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದರು.
ಕೃತ್ಯಕ್ಕೆ ಸುಹಾಸ್ ಶೆಟ್ಟಿ ಮೊದಲು ಅಭಿಷೇಕ್ ನೊಂದಿಗೆ ಯೋಜನೆ ರೂಪಿಸಿದ್ದ. ಅನಂತರ ಉಳಿದವರನ್ನು ಸೇರಿಸಿಕೊಂಡಿದ್ದಾರೆ. ಯಾರಿಗೆ ಹೊಡೆಯುವುದು ಎಂದು ಚರ್ಚಿಸಿದಾಗ ಫಾಝಿಲ್ ಗೆ ಹೊಡೆಯಲು ನಿರ್ಧರಿಸಿದ್ದಾರೆ. ಕೃತ್ಯಕ್ಕೆ ಮೂರು ತಲವಾರು ಉಪಯೋಗಿಸಿದ್ದಾರೆ. ಕೃತ್ಯ ನಡೆಸಿದ ದಿನ ಫಾಝಿಲ್ ಗಾಗಿ ಜಂಕ್ಷನ್ ನಲ್ಲಿ ಓಡಾಡಿದ್ದರು. ನಂತರ ಅಂಗಡಿ ಬಳಿ ಫಾಝಿಲ್ ಸಿಕ್ಕಾಗ ಆತನ ಮೇಲೆ ಸುಹಾಸ್, ಮೋಹನ್ ಮತ್ತು ಅಭಿಷೇಕ್ ನೇರವಾಗಿ ಕೊಲೆ ನಡೆಸಿದ್ದಾರೆ.
ಗುರುವಾರ ರಾತ್ರಿ ಕೃತ್ಯ ನಡೆಸಿದ ಆರೋಪಿಗಳು ಪಲಿಮಾರು ರಸ್ತೆಯ ಮೂಲಕ ಪಡುಬಿದ್ರಿ ಸಮೀಪದ ಇನ್ನಾಕ್ಕೆ ಹೋಗಿ ಅಲ್ಲಿ ಕಾರನ್ನಿಟ್ಟು, ಅಲ್ಲಿಂದ ಬೇರೆ ಕಾರಿನಲ್ಲಿ ತೆರಳಿದ್ದರು. ತನಿಖೆಯ ಬಳಿಕ ಇಂದು ಬೆಳಗ್ಗೆ ಖಚಿತ ಮಾಹಿತಿ ಮೇರೆಗೆ ಉದ್ಯಾವರ ಸಮೀಪ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಕಮಿಷನರ್ ಶಶಿಕುಮಾರ್ ಹೇಳಿದರು.
ಸುರತ್ಕಲ್ ನಲ್ಲಿ ಬೇರೆಯವರನ್ನು ಹತ್ಯೆ ಮಾಡಲು ಹೋಗಿ ಫಾಜಿಲ್ ಕೊಲೆ ಮಾಡಿದ್ದರು ಎಂಬ ಮಾತುಗಳು ಕೇಳಿಬಂದಿತ್ತು. ಆದರೆ ಈ ಹಂತಕರು ಫಾಝಿಲ್ ಗೆ ಗುರಿ ಇಟ್ಟಿದ್ದರು. ಕೃತ್ಯಕ್ಕೆ ಮೊದಲು ಚರ್ಚೆಯ ವೇಳೆ ಆರರಿಂದ ಏಳು ಜನಕ್ಕೆ ಹೊಡೆಯುವ ಬಗ್ಗೆ ನಿರ್ಧರಿಸಿ ಅಂತಿಮವಾಗಿ ಫಾಝಿಲ್ ಗೆ ಗುರಿ ಇಟ್ಟಿದ್ದರು ಎಂದರು.
ಈ ಆರೋಪಿಗಳು ಫಾಝಿಲ್ ನನ್ನೇ ಯಾಕೆ ಟಾರ್ಗೆಟ್ ಮಾಡಿದ್ದರು ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ. ಪ್ರಮುಖ ಆರೋಪಿ ಸುಹಾಸ್ ಮೇಲೆ ಒಂದು ಕೊಲೆ ಸಹಿತ ನಾಲ್ಕು ಪ್ರಕರಣಗಳಿವೆ.




