ಫಾಝಿಲ್ ಹತ್ಯೆ ಪ್ರಕರಣ: ಸುರತ್ಕಲ್, ಬಜಪೆ, ಪಣಂಬೂರು, ಮೂಲ್ಕಿ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 21 ಮಂದಿಯನ್ನು ವಶಕ್ಕೆ, ತೀವ್ರ ವಿಚಾರಣೆ
ಮಂಗಳೂರು: ಸುರತ್ಕಲ್ನ ಮಂಗಳ ಪೇಟೆಯ ಮುಹಮ್ಮದ್ ಫಾಝಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮಹತ್ವದ ಪ್ರಗತಿ ಸಾಧಿಸಿದ್ದಾರೆ.
ಎಡಿಜಿಪಿ ಆಲೋಕ್ ಕುಮಾರ್ ಸ್ವತಃ ತನಿಖೆಯ ಉಸ್ತುವಾರಿ ವಹಿಸಿದ್ದು, ಶೀಘ್ರವಾಗಿ ಅಪರಾಧಿಗಳನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪೊಲೀಸರು ಈಗಾಗಲೇ ಸುರತ್ಕಲ್, ಬಜಪೆ, ಪಣಂಬೂರು, ಮೂಲ್ಕಿ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 21 ಮಂದಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿಗಳ ಪತ್ತೆಗೆ ಐದು ತಂಡಗಳನ್ನು ರಚಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಹಿಂದೆ ಜಿಲ್ಲೆಯಲ್ಲಿ ಡಿಸಿಪಿಯಾಗಿದ್ದ, ಈಗ ಹಾಸನ ಎಸ್ಪಿ ಆಗಿರುವ ಹರಿರಾಂ ಶಂಕರ್ ಅವರನ್ನೂ ಕರೆಯಿಸಲಾಗಿದೆ. ಗುರುವಾರ ರಾತ್ರಿ ಹತ್ಯೆ ನಡೆದ ಸಮಯದಲ್ಲಿ ಅಲ್ಲಿ ಯಾವೆಲ್ಲ ಮೊಬೈಲ್ಗಳು ಸಕ್ರಿಯವಾಗಿದ್ದವು, ಯಾರು ಯಾರಿಗೆ ಕರೆ ಮಾಡಿದ್ದರು ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ.
ಇನ್ನೊಂದೆಡೆ ಫಾಝಿಲ್ಗೆ ಯಾರೊಂದಿಗಾದರೂ ದ್ವೇಷವಿತ್ತೇ, ಯಾವ ಕಾರಣಕ್ಕೆ ಕೊಲೆ ನಡೆದಿದೆ, ಇತ್ಯಾದಿ ಸಹಿತ ಹಲವು ಆಯಾಮಗಳಲ್ಲಿ ತನಿಖೆ ನಡೆದಿದೆ. ಸಂಬಂಧಿಸಿದ ಎಲ್ಲ ಕಡೆಯ ಸಿಸಿಟಿವಿ ಫೂಟೇಜ್ಗಳನ್ನು ಪೊಲೀಸರು ಕಲೆಹಾಕಿದ್ದಾರೆ. ಕೊಲೆಯ ಹಿಂದೆ ಕೆಲವು ಸಮಾಜ ಘಾತಕ ಶಕ್ತಿಗಳು ಇರುವುದು ಕಂಡು ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.




