ದಿನಬಳಕೆ ವಸ್ತುಗಳ ಮೇಲೆ ತೆರಿಗೆ ಹೇರಿಕೆಯ ವಿರುದ್ಧ ಎಸ್ಡಿಪಿಐ ಕೂರ್ನಡ್ಕ ವಾರ್ಡ್ ಸಮಿತಿ ವತಿಯಿಂದ ಪ್ರತಿಭಟನೆ
ಪುತ್ತೂರು: ಕೇಂದ್ರ ಸರ್ಕಾರವು ಜಾರಿಗೊಳಿಸಿದ ದಿನಬಳಕೆಯ ಆಹಾರ ವಸ್ತುಗಳ ಮೇಲಿನ ತೆರಿಗೆ ಹೇರಿಕೆ ಖಂಡಿಸಿ ಎಸ್ಡಿಪಿಐ ಕೂರ್ನಡ್ಕ ವಾರ್ಡ್ ಸಮಿತಿ ವತಿಯಿಂದ ಪ್ರತಿಭಟನೆಯು ಕೂರ್ನಡ್ಕ ಜಂಕ್ಷನ್ ಬಳಿ ನಡೆಯಿತು.

ಎಸ್ಡಿಪಿಐ ಪುತ್ತೂರು ವಿಧಾನ ಸಭಾ ಕ್ಷೇತ್ರ ಅದ್ಯಕ್ಷರಾದ ಹಾಜಿ ಇಬ್ರಾಹಿಂ ಸಾಗರ್ ರವರು ಮಾತನಾಡಿ ಜನರಿಗೆ ಸುಳ್ಳು ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದಂತಹ ಬಿಜೆಪಿ ಸರ್ಕಾರ ಜನರನ್ನು ಮೂರ್ಖರನ್ನಾಗಿಸಿದೆ. ಜನವಿರೋಧಿ ನೀತಿಗಳಿಂದ ಜನಸಾಮಾನ್ಯರು ಕಂಗಾಲಾಗಿದ್ದು ಕೂಡಲೇ ಸರ್ಕಾರ ಜಿ.ಎಸ್.ಟಿ ಯಂತಹ ಅವೈಜ್ಞಾನಿಕ ನೀತಿಯನ್ನು ವಾಪಸ್ ಪಡೆಯಬೇಕು ಎಂದರು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಎಸ್ಡಿಪಿಐ ಪುತ್ತೂರು ವಿಧಾನ ಸಭಾ ಕ್ಷೇತ್ರ ಸಮಿತಿಯ ಉಪಾಧ್ಯಕ್ಷರಾದ ಅಬ್ದುಲ್ ಹಮೀದ್ ಸಾಲ್ಮರರವರು 2014ರಲ್ಲಿ ಹಲವಾರು ಸುಳ್ಳು ಘೋಷಣೆ, ಭಾಷಣಗಳ ಮೂಲಕ ಅಧಿಕಾರಕ್ಕೆ ಬಂದಂತಹ ಬಿಜೆಪಿ ಸರಕಾರ ಜನವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಾ ಜನಸಾಮಾನ್ಯರ ಜೀವನಕ್ಕೆ ಕೊಳ್ಳಿಯಿಟ್ಟಿದ್ದಾರೆ. ದೇಶದಲ್ಲಿ ಪೌಷ್ಟಿಕಾಂಶ ಕೊರತೆಯಿಂದ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಂತರಾಷ್ಟ್ರೀಯ ಬಡತನ ಸೂಚ್ಯಂಕದಲ್ಲಿ ಭಾರತ ತೀರಾ ಹಿಂದುಳಿದ ರಾಷ್ಟ್ರವಾಗಿದೆ. ಈ ಸರ್ಕಾರ ದೇಶವನ್ನು ಅಭಿವೃದ್ಧಿಯ ಅದಃಪತನಕ್ಕೆ ಕೊಂಡೊಯ್ಯುತ್ತಿವೆ. ಜಿ.ಎಸ್.ಟಿ ಜಾರಿಗೆ ತರುವ ಸಮಯದಲ್ಲಿ ಅಹಾರ ವಸ್ತುಗಳ ಮೇಲೆ ಜಿ.ಎಸ್.ಟಿ ತೆರಿಗೆ ಹೇರಿಕೆ ಇಲ್ಲ ಎಂಬ ಮಾತುಕೊಟ್ಟಿದ್ದ ಮೋದಿ ಸರಕಾರ ಇಂದು ಅಹಾರ ವಸ್ತುಗಳಿಗೂ ಜಿ.ಎಸ್.ಟಿ ಜಾರಿಗೊಳಿಸಿ ಬಡವರಿಗೆ ಅನ್ಯಾಯ ಮಾಡಿದ್ದಾರೆ ಎಂದು ಕಿಡಿಕಾರಿದರು.
ಸರ್ಕಾರದ ಜಿ.ಎಸ್.ಟಿ ತೆರಿಗೆಯ ಹಾಗೂ ಸರ್ವಾಧಿಕಾರಿ ಧೋರಣೆಯ ವಿರುದ್ಧ ಘೋಷಣೆಗಳನ್ನು ಕೂಗುವುದರ ಮೂಲಕ ವಿರೋಧ ವ್ಯಕ್ತಪಡಿಸಲಾಯಿತು.
ಈ ಸಂದರ್ಭದಲ್ಲಿ ಎಸ್ಡಿಪಿಐ ಪುತ್ತೂರು ವಿಧಾನ ಸಭಾ ಕ್ಷೇತ್ರ ಸಮಿತಿಯ ಜೊತೆ ಕಾರ್ಯದರ್ಶಿ ಯಹ್ಯಾ ಕೆ.ಹೆಚ್, ನಗರ ಸಮಿತಿಯ ಅಧ್ಯಕ್ಷರಾದ ಸಿರಾಜ್ ಕೂರ್ನಡ್ಕ, ಕೂರ್ನಡ್ಕ ವಾರ್ಡ್ ಸಮಿತಿಯ ಅಧ್ಯಕ್ಷರಾದ ಹಾರಿಸ್ ಫಠಾಣ್, ಹಾಗೂ ಪ್ರಮುಖರಾದ ಸಮೀರ್ ನಾಜೂಕ್ ಮೊದಲಾದವರು ಉಪಸ್ಥಿತರಿದ್ದರು.




