ಉಪ್ಪಿನಂಗಡಿ: ವರದಕ್ಷಿಣೆ ರಹಿತ ವಿವಾಹ ಮಾಡಿಕೊಳ್ಳುವುದಾಗಿ ಹೇಳಿ ಹೆಚ್ಚಿನ ವರದಕ್ಷಿಣೆಗಾಗಿ ಕಿರುಕುಳ, ಹಲ್ಲೆ: ಪತ್ನಿ ಆರೋಪ
ಪುತ್ತೂರು: ವರದಕ್ಷಿಣೆ ರಹಿತ ವಿವಾಹ ಮಾಡಿಕೊಳ್ಳುವುದಾಗಿ ಪ್ರಚಾರಗಿಟ್ಟಿಸಿ ಬಳಿಕ ವರದಕ್ಷಿಣೆ ಪಡೆದು ಮದುವೆಯಾಗಿರುವ ವ್ಯಕ್ತಿಯೋರ್ವ ಇದೀಗ ಮತ್ತಷ್ಟು ವರದಕ್ಷಿಣೆ ತರುವಂತೆ ಮಾನಸಿಕ ಕಿರುಕುಳ ನೀಡಿ ಹಲ್ಲೆ ನಡೆಸಿರುವುದಾಗಿ ಹೇಳಿಕೊಂಡು ಆತನ ಪತ್ನಿ ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ರಾಮಕುಂಜ ಆತೂರು ಪೆರ್ಜಿ ನಿವಾಸಿ ಪಿ.ಹುಸೈನ್ ಮತ್ತು ಮೈಮುನಾ ದಂಪತಿ ಪುತ್ರಿ ಸೆಮೀಮಾ(೨೮ವ.)ರವರು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ೨೦೧೩ರ ಜೂ.೧೫ಕ್ಕೆ ನನ್ನ ವಿವಾಹವು ಹಾಸನದ ಚಿಕ್ಕನನಾಡು ಟಿ.ಎಚ್.ಇಬ್ರಾನ್ ಅವರೊಂದಿಗೆ ನಡೆದಿತ್ತು. ಇಬ್ರಾನ್ ವಧು ನೋಡಲು ಬಂದ ವೇಳೆ, ವರದಕ್ಷಿಣೆ ರಹಿತ ವಿವಾಹವಾಗುವುದಾಗಿ ನಂಬಿಸಿ ವಿವಾಹವಾಗಿ ಬಳಿಕ ವರದಕ್ಷಿಣೆ ಪಡೆದಿದ್ದರು. ಆ ಬಳಿಕ ಪದೇ ಪದೇ ನನಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಈ ಕುರಿತು ನನ್ನ ತವರು ಮನೆಗೆ ತಿಳಿಸಿದ್ದಾಗ ರಾಜಿ ಮಾತುಕತೆ ನಡೆಸಲಾಗಿತ್ತಾದರೂ ಮತ್ತೆ ಮತ್ತೆ ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ತಮಗೆ ೨ ಹೆಣ್ಣು ಮತ್ತು ಒಂದು ಗಂಡು ಮಗುವಿದೆ. ಇದೀಗ ಗಂಡ ಇಬ್ರಾನ್, ಅತ್ತಿಗೆಯಂದಿರಾದ ರೇಶ್ಮಾಬಾನು, ಪರ್ವೀಸ್ ಬಾನು, ನಾಸಿಮ, ಇಲಿಯಾಸ್ ಬೇಗ್, ಪರ್ವೀಸ್ ಬಾನು ಅವರ ಮಗ ಫಯಾಜ್ ಪಾಶಾ, ಮನೆ ಮಂದಿ ಸೇರಿಕೊಂಡು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಜು.೨೧ರಂದು ಹಾಸನ ಮನೆಯಿಂದ ನನ್ನನ್ನು ಆತೂರು ಮನೆಗೆ ಕಳುಹಿಸಿದ್ದಾರೆ. ಅದೇ ದಿನ ರಾತ್ರಿ ನನ್ನ ಗಂಡ ಆತೂರು ಮನೆಗೆ ಬಂದು ನನಗೆ ಹಲ್ಲೆ ನಡೆಸಿದ್ದಾರೆ. ಘಟನೆ ಕುರಿತು ಕಡಬ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಸೆಮೀಮಾ ಅವರು ತಿಳಿಸಿದ್ದಾರೆ.




