ಉಳ್ಳಾಲ : ವಿವಾಹಿತ ಮಹಿಳೆಯ ಸಂಶಯಾಸ್ಪದ ಸಾವು: ತಾಯಿ ಸಾವು, ತಂದೆ ಜೈಲಿಗೆ – ಎಂಟು ತಿಂಗಳ ಮಗು ಅನಾಥ
ಉಳ್ಳಾಲ: ಮಿಲ್ಲತ್ ನಗರ ಮುಕ್ಕಚ್ಚೇರಿಯ ಜಂಶೀರಾ ಅನುಮಾನಸ್ಪದ ಸಾವಿಗೆ ಸಂಬಂಧಿಸಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಆರೋಪಿ ಪತಿ ಇಮ್ರಾನ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮಿಲ್ಲತ್ ನಗರದ ಮನೆಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿ ಆರೋಪಿ ಪತಿ ಇಮ್ರಾನ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಮನೆಯೊಳಗಿನಿಂದ ಇಮ್ರಾನ್ ನ್ನು ವಶಕ್ಕೆ ಪಡೆದುಕೊಂಡಿದ್ದರು. ಮೃತದೇಹವನ್ನು ನಾಟೆಕಲ್ ಕಣಚೂರು ಆಸ್ಪತ್ರೆಗೆ ಶವಮಹಜರಿಗೆ ಕಳುಹಿಸಿದ್ದರು. ಜಂಶೀರಾ ಸಾವಿನ ಕುರಿತು ಸಂಬಂಧಿಕರು ಅನುಮಾನ ವ್ಯಕ್ತಪಡಿಸಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ವಿಚಾರಣೆ ನಡೆಸಿ ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಪ್ರಕರಣವೆಂದು ಪರಿಗಣಿಸಲಾಗಿದೆ. , ಆತ್ಮಹತ್ಯೆಗೆ ಪ್ರಚೋದನೆಯಡಿ ಪತಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ದಂಪತಿ ವೈಮನಸ್ಸಿನಿಂದ ,ಎಂಟು ತಿಂಗಳ ಮಗುವಿಗೆ ಆಸರೆಯಾಗಿದ್ದ ತಾಯಿಯೂ ಇನ್ನಿಲ್ಲವಾಗಿ ಇದೀಗ ಮಗು ಅನಾಥವಾಗಿದೆ.
ಮಿಲ್ಲತ್ ನಗರ ನಿವಾಸಿ ಜಂಶೀರ ಎರಡು ವರ್ಷಗಳ ಹಿಂದೆ ಮುಕ್ಕಚ್ಚೇರಿ ನಿವಾಸಿ ಇರ್ಫಾನ್ ಜೊತೆ ವಿವಾಹ ಆಗಿತ್ತು. ವಿವಾಹದ ಬಳಿಕ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದ್ದು, ಹಿರಿಯರು ಸೇರಿ ಮಾತುಕತೆ ಕೂಡಾ ನಡೆಸಿದ್ದರು. ರವಿವಾರ ಕ್ಷುಲ್ಲಕ ಕಾರಣಕ್ಕೆ ದಂಪತಿ ನಡುವೆ ಜಗಳ ನಡೆದಿದ್ದು, ಇದರಿಂದ ಕೋಪಗೊಂಡ ಆಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪತಿ ಇಮ್ರಾನ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಘಟನಾ ಸ್ಥಳಕ್ಕೆ ಆಗಮಿಸಿದ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಇಮ್ರಾನ್ ನನ್ನು ಬಂಧಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿ ತನಿಖೆ ಮುಂದುವರಿಸಿದ್ದಾರೆ. ಜಂಶೀರ ನನ್ನು ಕೊಲೆ ಮಾಡಿರಬೇಕು ಎಂದು ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಆಕೆಯ ಸಾವು ಕೊಲೆಯೋ, ಆತ್ಮಹತ್ಯೆಯೊ ಎಂದು ಖಚಿತಪಡಿಸಿಕೊಳ್ಳಲು ಪೊಲೀಸರು ಪೋಸ್ಟ್ ಮಾರ್ಟಂ ವರದಿಗಾಗಿ ಕಾಯುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಕೊಲೆಯೋ ಆತ್ಮಹತ್ಯೆಯೊ ಎಂದು ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.





