ಕಲ್ಲಡ್ಕ: ಕುಸಿಯುವ ಭೀತಿಯಲ್ಲಿ ಗೋಳ್ತಮಜಲು-ಪಟ್ಟೆಕೋಡಿ ರಸ್ತೆ: ಆತಂಕದಲ್ಲಿ ವಿದ್ಯಾರ್ಥಿಗಳು ಮತ್ತು ಸ್ಥಳೀಯ ನಿವಾಸಿಗಳು
ವಿಟ್ಲ : ವಿಟ್ಲ – ಕಲ್ಲಡ್ಕ ಹೆದ್ದಾರಿಯಲ್ಲಿರುವ ಗೋಳ್ತಮಜಲಿನಿಂದ ಪಟ್ಟೆಕೋಡಿಗೆ ಇರುವ ಕಾಂಕ್ರೀಟ್ ಸಂಪರ್ಕ ರಸ್ತೆಯು ಯಾವುದೇ ನಿಮಿಷ ಕುಸಿಯುವ ಭೀತಿಯಲ್ಲಿದೆ. ರಸ್ತೆಯ ಒಂದು ಬದಿಯಲ್ಲಿ ಅಗಲವಾದ ತೋಡು ಇದ್ದು ಹರಿಯುವ ನೀರಿನ ರಭಸಕ್ಕೆ ರಸ್ತೆಯ ಅಡಿಯ ಮಣ್ಣನ್ನು ಕೊರೆದುಕೊಂಡು ಹೋಗುತ್ತದೆ. ಇದರಿಂದಾಗಿ ಅಲ್ಲಲ್ಲಿ ದೊಡ್ಡ ದೊಡ್ಡ ಬಿರುಕು ಮತ್ತು ಹೊಂಡಗಳು ಉಂಟಾಗಿವೆ. ರಸ್ತೆಯ ಇನ್ನೊಂದು ಬದಿಯಲ್ಲಿ ಸರಿಯಾದ ಚರಂಡಿ ಇಲ್ಲದಿರುವುದರಿಂದ ಮೇಲಿನ ಗುಡ್ಡೆಯಿಂದ ಬರುವ ನೀರೆಲ್ಲಾ ರಸ್ತೆಯಲ್ಲೇ ಹರಿಯುತ್ತಿರುವ ಕಾರಣ ಯಾವ ಸಮಯದಲ್ಲೂ ರಸ್ತೆಯು ಕುಸಿಯುವ ಸಾಧ್ಯತೆಯಿದೆ. ಅನುಗ್ರಹ ಪಿ.ಯು ಕಾಲೇಜು, ಅನುಗ್ರಹ ಪ್ರಥಮ ದರ್ಜೆ ಕಾಲೇಜು, ಜೆಮ್ ಪ್ರಾಥಮಿಕ ಮತ್ತು ಪೌಢಶಾಲೆಗಳು ಹಾಗೂ ಐವತ್ತಕ್ಕೂ ಮಿಕ್ಕಿದ ಮನೆಗಳಿಗೆ ಸಂಪರ್ಕ ರಸ್ತೆ ಇದಾಗಿದ್ದು ಶಾಲಾ ಬಸ್ಗಳ ಸಂಚಾರವು ಅತ್ಯಂತ ತ್ರಾಸದಾಯಕವಾಗಿದೆ. ಸಂಬಂಧಪಟ್ಟ ಇಲಾಖೆಯವರು ತುರ್ತು ಗಮನಹರಿಸಿ ಪರಿಹಾರ ಒದಗಿಸದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.




