ಬಂಟ್ವಾಳ: ಶೆಡ್ ಗೆ ಗುಡ್ಡ ಕುಸಿದ ಪ್ರಕರಣ: ಮೂವರ ರಕ್ಷಣೆ, ಒಬ್ಬ ಮೃತ್ಯು, ಎಲ್ಲರೂ ಕೇರಳ ರಾಜ್ಯದವರು
ಬಂಟ್ವಾಳ: ಕಾರ್ಮಿಕರು ಉಳಿದುಕೊಂಡ ಶೆಡ್ ಗೆ ಕುಸಿದ ಗುಡ್ಡ, ಶೆಡ್ ನೊಳಗೆ ಸಿಲುಕಿಕೊಂಡ ನಾಲ್ವರು ಕಾರ್ಮಿಕರ ಪೈಕಿ ಓರ್ವ ಮೃತಪಟ್ಟಿದ್ದು, ಇಬ್ಬರಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪಂಜಿಕಲ್ಲು ಗ್ರಾಮದ ಮುಕ್ಕುಡ ಎಂಬಲ್ಲಿ ಹೆನ್ರಿ ಕಾರ್ಲೊ ಎಂಬವರ ಮನೆಯ ರಬ್ಬರ್ ತೋಟದಲ್ಲಿ ಕೆಲಸ ಮಾಡುತ್ತಿದ್ದ ಐವರ ಪೈಕಿ ನಾಲ್ವರು ಗುಡ್ಡ ಜರಿದು ಶೆಡ್ ನೊಳಗೆ ಸಿಲುಕಿಕೊಂಡಿದ್ದರು, ಅದರಲ್ಲಿ ಇಬ್ಬರನ್ನು ಜೆಸಿಬಿ ಮೂಲಕ ರಕ್ಷಣೆ ಮಾಡಿದರೆ ಓರ್ವ ಮೃತಪಟ್ಟಿದ್ದಾನೆ. ಇನ್ನೋರ್ವನನ್ನು ಮೇಲಕ್ಕೆ ತೆಗೆಯಲು ಕಾರ್ಯಚರಣೆ ಮುಂದುವರಿದಿದೆ.
ಪಾಲಕ್ಕಾಡು ನಿವಾಸಿ ವಿಜು (46) ಮೃತಪಟ್ಟ ದುರ್ದೈವಿ.
ಉಳಿದಂತೆ ಕೊಟ್ಟಾಂ ನಿವಾಸಿ ಬಾಬು (46) ಎಂಬವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೆ, ಕಣ್ಣೂರು ನಿವಾಸಿ ಜಾನ್ (44)ಎಂಬಾತ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸಂತೋಷ್ ಅಲ್ಫೊನ್ಸಾ ಅವರ ರಕ್ಷಣಾ ಕಾರ್ಯ ಮುಂದುವರಿದಿದೆ.
ಶೆಡ್ ನ ಶೌಚಾಲಯದ ಸಮೀಪ ಸಿಲುಕಿಕೊಂಡಿರುವ ವ್ಯಕ್ತಿಯನ್ನು ಮಣ್ಣಿನಿಂದ ಹೊರತೆಗೆಯುವ ಕಾರ್ಯಚರಣೆ ಮುಂದುವರಿದಿದ್ದು, ಆತನ ಹೆಸರು ತಿಳಿದು ಬಂದಿಲ್ಲ. ಕಾರ್ಯ ನಿಮಿತ್ತ ಬೆಂಗಳೂರಿಗೆ ತೆರಳಿದ್ದ ಶಾಸಕ ರಾಜೇಶ್ ನಾಯ್ಕ್ ಅವರು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಅವರನ್ನು ಬೆಂಗಳೂರಿನಿಂದಲೇ ದೂರವಾಣಿ ಮೂಲಕ ಸಂಪರ್ಕಿಸಿ ರಕ್ಷಣಾ ಕಾರ್ಯಚರಣೆಗೆ ನಿರ್ದೇಶನ ನೀಡಿದ್ದಾರೆ. ನಾಳೆ ಬೆಳಿಗ್ಗೆ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಜೊತೆ ಘಟನಾ ಸ್ಥಳಕ್ಕೆ ಬೇಟಿ ನೀಡುವುದಾಗಿ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.




