ಜುಲೈ 16 ಕ್ಕೆ ಮಂಗಳೂರಿನಲ್ಲಿ ಬೃಹತ್ “ಗರ್ಲ್ಸ್ ಕಾನ್ಫರೆನ್ಸ್”: ಕ್ಯಾಂಪಸ್ ಫ್ರಂಟ್
ಮಂಗಳೂರು: ದೇಶವು ಸ್ವತಂತ್ರಗೊಂಡು 75ನೇ ವರ್ಷದ ಆಚರಣೆಯ ಹೊಸ್ತಿಲಲ್ಲಿ ನಾವಿದ್ದೇವೆ. ಈ ಸಂದರ್ಭದಲ್ಲಿ, ದೇಶದ ಸಂವಿಧಾನ ಪ್ರತಿಪಾದಿಸುವ ಮೂಲ ಮೌಲ್ಯಗಳನ್ನು ಅಧಿಕಾರದಲ್ಲಿರುವ ಸರಕಾರವೇ ನಾಶಪಡಿಸಲು ಪಣತೊಟ್ಟಿದೆ. ಅಧಿಕಾರದಲ್ಲಿರುವ ಬಿಜೆಪಿ ಕೇವಲ ಧರ್ಮದ, ಜಾತಿಯ ಹೆಸರಲ್ಲಿ ಕೋಮುವಾದವನ್ನು ಬಿತ್ತಿ ಜನರ ಮನಸ್ಸುಗಳನ್ನು ಕಲುಷಿತಗೊಳಿಸಿ ತನ್ನ ರಾಜಕೀಯ ಅಸ್ತಿತ್ವವನ್ನು ಭದ್ರಗೊಳಿಸಲು ಹಪಹಪಿಸುತ್ತಿದೆ. ಒಂದು ಜವಾಬ್ದಾರಿಯುತ ಸರಕಾರದ ಇಂತಹ ಅವಿವೇಕ, ಅಸಂವಿಧಾನಿಕ ಮತ್ತು ಬೇಜವಾಬ್ದಾರಿತನದ ನಡೆಯಿಂದ ಹೆಚ್ಚಾಗಿ ಅನ್ಯಾಯಕ್ಕೊಳಗಾಗೋದು, ಬಲಿಪಶುಗಳಾಗೋದು ಮಹಿಳೆಯರು.
ದೇಶದ ಉದ್ದಗಲಕ್ಕೂ ದ್ವೇಷದ ವಾತಾವರಣ ಸೃಷ್ಟಿಸಿ ಇಡೀ ದೇಶವನ್ನೇ ಅರಾಜಕತೆಯ ಕೂಪಕ್ಕೆ ತಳ್ಳಿ ಆಳುತ್ತಿರುವ ಬಿಜೆಪಿಯ ಫ್ಯಾಸಿಸ್ಟ್ ಮನೋಭಾವದ ರಾಜಕೀಯಕ್ಕೆ ಶೋಷಿತ ಸಮುದಾಯಗಳ ಮೇಲೆ ದೌರ್ಜನ್ಯ, ದಬ್ಬಾಳಿಕೆ, ಆಕ್ರಮಣ, ಅನ್ಯಾಯ ನಡೆಯುವಾಗ ಇದಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಫ್ಯಾಸಿಸ್ಟರ ಬೇಟೆಗೆ ಹೆಚ್ಚಿನ ಸಂಕಷ್ಟಗಳನ್ನು ಅನುಭವಿಸುವವರು ಮಹಿಳೆಯರೇ ಆಗಿರುತ್ತಾರೆ. ಉದಾಹರಣೆಗೆ ಬಿಜೆಪಿಯ ದ್ವೇಷ ರಾಜಕೀಯದ ಭಾಗವಾಗಿ ಉತ್ತರ ಪ್ರದೇಶ, ದೆಹಲಿ ಮತ್ತು ಮಧ್ಯಪ್ರದೇಶದಲ್ಲಿ ಮುಸ್ಲಿಮರ ಮನೆಗಳನ್ನು ಗುರಿಪಡಿಸಿ ಧ್ವಂಸಗೊಳಿಸಲಾಯಿತು. ಇದರಿಂದ ಮನೆಯಿಂದ ವಂಚಿತಗೊಂಡು, ಆಸರೆಯನ್ನು ಕಳೆದುಕೊಂಡು ಬೀದಿಗೆ ತಳ್ಳಿದಾಗ ಸಣ್ಣ ಮಕ್ಕಳು, ಮಹಿಳೆಯರು ನಿರ್ಗತಿಕರಾಗಿ ತೊಂದರೆಯಿಂದ ಬಳಲುತ್ತಿದ್ದಾರೆ. ನ್ಯಾಯ, ಸತ್ಯದ ಪರ ಧ್ವನಿ ಎತ್ತಿದ ಹಲವು ವಿದ್ಯಾರ್ಥಿ ನಾಯಕರು, ಸಾಮಾಜಿಕ ಹೋರಾಟಗಾರರು, ಪ್ರಭುತ್ವದ ವಿರುದ್ಧ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದವರು ಜೈಲಿನ ಕಂಬಿಗಳ ಹಿಂದೆ ಹಲವಾರು ವರ್ಷಗಳಿಂದ, ದಿನಗಳಿಂದ ಕಾಲ ಕಳೆಯುತ್ತಾ ನ್ಯಾಯ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಸೂಕ್ಷ್ಮವಾಗಿ ಅರ್ಥೈಸಿಕೊಳ್ಳಬೇಕಾದ ವಿಚಾರ ಯಾವುದೇ ರೀತಿಯ ಫ್ಯಾಸಿಸ್ಟ್ ದೌರ್ಜನ್ಯಕ್ಕೆ ತುತ್ತಾಗಿ, ತೀವ್ರ ಸಂಕಷ್ಟ ಎದುರಿಸುವುದು ಮಹಿಳೆಯರು. ಫ್ಯಾಸಿಸ್ಟರ ಅಟ್ಟಹಾಸ ಸಮಾಜದಲ್ಲಿ ಮಹಿಳೆಯರನ್ನು ನಿರ್ಗತಿಕರಾನ್ನಾಗಿ ಮಾಡುತ್ತೆ. ಇದರ ಪರಿಣಾಮವಾಗಿ ಮಹಿಳೆಯರು ಮಾನಸಿಕವಾಗಿ, ದೈಹಿಕವಾಗಿ ಹಿಂಸೆಗೊಳಪಡುತ್ತಿದ್ದಾರೆ.
ಇತ್ತೀಚಿಗೆ ಕೇವಲ ಶಿರವಸ್ತ್ರ ಧರಿಸಿದ್ದಾರೆಂಬ ಕಾರಣದಿಂದ ಸಾವಿರಾರು ಮುಸ್ಲಿಂ ವಿದ್ಯಾರ್ಥಿನಿಯರನ್ನು ಶಿಕ್ಷಣ ಪಡೆಯುವುದರಿಂದ ತಡೆಯಲಾಯಿತು. ಕೊನೆಯದಾಗಿ ನ್ಯಾಯಾಂಗ ವ್ಯವಸ್ಥೆಯಿಂದಲೂ ಸಹ ವಿದ್ಯಾರ್ಥಿನಿಯರಿಗೆ ನ್ಯಾಯ ಸಿಗಲಿಲ್ಲ. ಇದರ ಪೂರ್ವನಿಯೋಜನೆ ಮತ್ತು ಉದ್ದೇಶವನ್ನರಿತಾಗ ರಾಜ್ಯ ಸರಕಾರ ನೇರವಾಗಿ ಈ ಸಮಸ್ಯೆಯನ್ನು ಹುಟ್ಟು ಹಾಕಿ ಮುಸ್ಲಿಂ ವಿದ್ಯಾರ್ಥಿನಿಯರನ್ನು ಶಿಕ್ಷಣದಿಂದ ವಂಚಿಸುವ ಹುನ್ನಾರ ನಡೆಸಿದ್ದಲ್ಲಿ ಅನುಮಾನವೇ ಇಲ್ಲ. ಹೀಗೆ ಮಹಿಳೆಯರನ್ನು, ವಿಶೇಷವಾಗಿ ಮುಸ್ಲಿಂ ಯುವತಿಯರನ್ನು ಸುಲ್ಲಿ ಬಾಯಿ, ಬುಲ್ಲಿ ಬಾಯಿ ಡೀಲ್ಸ್ ಎಂಬ ಆಪ್ ಗಳ ಮೂಲಕ ಹರಾಜು ಮಾಡಿ ಮಾನ ಹಾನಿ ಮಾಡಿ, ಅವರನ್ನು ಮಾನಸಿಕವಾಗಿ ಕುಗ್ಗಿಸುವುದನ್ನು ಸಹ ಪ್ರತ್ಯಕ್ಷವಾಯಿತು. ಇಂತಹ ಆಪ್ ಗಳನ್ನು ಸೃಷ್ಟಿಸಿ ಮಹಿಳೆಯರ ಮಾನ ಹಾನಿ ನಡೆಸಿದ ಕೋಮುವಿಷ ಜಂತುಗಳು ಇಂದಿಗೆ ಬಹಳ ಸುಲಭವಾಗಿ ನ್ಯಾಯಾಲಯದಲ್ಲಿ ಜಾಮೀನು ಪಡೆದು ಹೊರಗಿದ್ದಾರೆ. ಒಂದು ಕಡೆ ಪ್ರಭುತ್ವದ ಅನ್ಯಾಯದ ವಿರುದ್ಧ ಧ್ವನಿ ಎತ್ತಿದರೆ ಅನ್ಯಾಯವಾಗಿ ಜೈಲಲ್ಲಿ ಕೊಳೆಯುವಂತೆ ಮಾಡಿ, ಮಹಿಳೆಯರ ತೇಜೋವಧೆ ಮಾಡುವ, ಸಮಾಜದಲ್ಲಿ ಕುಲಕ್ಷಿತ ವಾತಾವರಣ ಸೃಷ್ಟಿಸುವವರಿಗೆ ಜಾಮೀನು ಸಿಗುತ್ತಿದೆ.
ರಾಜ್ಯದ ಪ್ರಸ್ತುತ ಚಿತ್ರಣವನ್ನರಿತಾಗ ಮಹಿಳೆಯರ ಮೇಲಿನ ದೌರ್ಜನ್ಯವು ಮಿತಿ ಮೀರಿದೆ. ಸರಕಾರ ಮಹಿಳೆಯರ ಸುರಕ್ಷತೆಯ ಬಗ್ಗೆ ತುಟಿ ಬಿಚ್ಚದೆ, ಮಹಿಳೆಯರ ಮೇಲೆ ದೌರ್ಜನ್ಯವೆಸಗುತ್ತಿದೆ. ಮಹಿಳೆಯರ, ಮುಸ್ಲಿಂ ವಿದ್ಯಾರ್ಥಿನಿಯರ ಆಯ್ಕೆಯ ಸ್ವಾತಂತ್ರವನ್ನು ಕಿತ್ತುಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲುಗೊಳಿಸಲು ಹೊರಟಿರುವ ಪ್ರಭುತ್ವದ ಕುತಂತ್ರವನ್ನು ವಿಫಲಗೊಳಿಸಲು ರಾಜಿ ರಹಿತ ಹೋರಾಟ ಒಂದೇ ದಾರಿ ಎಂಬುದನ್ನು ಅರಿತು ಮುನ್ನಡೆಯಬೇಕಾಗಿದೆ ಈ ನಿಟ್ಟಿನಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯು “ಆಯ್ಕೆಯ ಸ್ವಾತಂತ್ರ್ಯವನ್ನು ಖಾತರಿಪಡಿಸೋಣ, ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿ ಹಿಡಿಯೋಣ” ಎಂಬ ಘೋಷವಾಕ್ಯದೊಂದಿಗೆ ಜುಲೈ 16 ರಂದು ಮಂಗಳೂರಿನಲ್ಲಿ ಬೃಹತ್ “ಗರ್ಲ್ಸ್ ಕಾನ್ಫರೆನ್ಸ್” ನಡೆಸುತ್ತಿದೆ. ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ಜ್ಯೋತಿ ವೃತ್ತದಿಂದ ವಿದ್ಯಾರ್ಥಿನಿಯರ ಜಾಥಾ ಪ್ರಾರಂಭಗೊಂಡು ಪುರಭವನದಲ್ಲಿ ಸಮಾಪ್ತಿಗೊಳ್ಳಲಿದೆ. ಪುರಭವನದಲ್ಲಿ ನಡೆಯುವ ಸಭಾ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಹಾಗೂ ರಾಜ್ಯದ ಹಲವಾರು ಹೋರಾಟಗಾರರು ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತಿ:
ಮುರ್ಶಿದಾ ಮಂಗಳೂರು ( ರಾಜ್ಯ ಸಮಿತಿ ಸದಸ್ಯೆ, ಕ್ಯಾಂಪಸ್ ಫ್ರಂಟ್ ಕರ್ನಾಟಕ)
ಫಾತಿಮಾ ಉಸ್ಮಾನ್ ( ರಾಜ್ಯ ಸಮಿತಿ ಸದಸ್ಯೆ, ಕ್ಯಾಂಪಸ್ ಫ್ರಂಟ್ ಕರ್ನಾಟಕ)
ಅಸ್ರೀನ್ ಬಂಟ್ವಾಳ ( ಜಿಲ್ಲಾ ನಾಯಕಿ, ಕ್ಯಾಂಪಸ್ ಫ್ರಂಟ್ ದ.ಕ)
ಫಾತಿಮಾ ಶಝ್ಮ ( ಜಿಲ್ಲಾ ನಾಯಕಿ, ಕ್ಯಾಂಪಸ್ ಫ್ರಂಟ್ ದ.ಕ)