ಪಾತ್ರೆ ತೊಳೆಯಲು ಹೋದ ಇಬ್ಬರು ಮಕ್ಕಳು ಕೃಷಿ ಹೊಂಡಕ್ಕೆ ಬಿದ್ದು ಮೃತ್ಯು
ಆನೇಕಲ್: ಪಾತ್ರೆ ತೊಳೆಯಲು ಹೋಗಿ ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ಟಿ.ಅಗ್ರಹಾರ ಗ್ರಾಮದಲ್ಲಿ ಘಟನೆ ನಡೆದಿದ್ದು ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತ ಮಕ್ಕಳಾದ ಶ್ರಾವಣಿ (12) ಅರ್ಚನಾ (9) ಇಬ್ಬರ ಹೆಣ್ಣು ಮಕ್ಕಳ ಪೋಷಕರು ಬಡ ಕುಟುಂಬದವರಾಗಿದ್ದು, ಗ್ರಾಮದ ಹೊರ ಭಾಗದಲ್ಲಿ ಮನೆ ಕಟ್ಟಿಕೊಂಡು ಕೃಷಿಯ ಜತೆಗೆ ಕೂಲಿ ಕೆಲಸ ಮಾಡುತ್ತಾರೆ. ಮಂಗಳವಾರ ಮಕ್ಕಳನ್ನು ಬಿಟ್ಟು ತಾಯಿ ಕೂಲಿ ಕೆಲಸಕ್ಕೆ ಹೋಗಿದ್ದು, ಮಕ್ಕಳಿಬ್ಬರು ಮನೆಯಲ್ಲಿ ಇದ್ದರು ಎನ್ನಲಾಗಿದೆ. ಮನೆಗೆ ಹೊಂದಿಕೊಂಡಿರುವ ಕೃಷಿ ಹೊಂಡದ ಬಳಿ ಪಾತ್ರೆಗಳನ್ನು ತೊಳೆಯಲೆಂದು ತಂದಿಟ್ಟಿದ್ದರು. ಈ ವೇಳೆ ಆಕಸ್ಮಿಕವಾಗಿ ತಂಗಿ ಅರ್ಚನಾ ಹೊಂಡದಲ್ಲಿ ಬಿದ್ದಿದ್ದಾಳೆ.
ಈಕೆಯನ್ನು ರಕ್ಷಣೆ ಮಾಡಲು ಹೋಗಿ ಅಕ್ಕ ಶ್ರಾವಣಿ ಕೂಡ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ. ಮದ್ಯಾಹ್ನ ಈ ಮಕ್ಕಳ ಚಿಕ್ಕಮ್ಮ ಹೊಲದಲ್ಲಿ ಮೇವಿಗಾಗಿ ಬಂದು ಮನೆಯಲ್ಲಿ ನೋಡಿದಾಗ ಮಕ್ಕಳು ಕಾಣದ ಬಗ್ಗೆ ಗಾಬರಿಗೊಂಡು ಹುಡುಕಾಟ ನಡೆಸಿದ್ದಾರೆ.
ಕೂಲಿಗೆ ಹೋಗಿದ್ದ ತಾಯಿಗೆ ಕರೆ ಮಾಡಿ ಮಕ್ಕಳು ಮನೆಯಲ್ಲಿ ಕಾಣದ ಬಗ್ಗೆ ಹೇಳಿದ್ದಾಳೆ. ಶಾಲೆಗೆ ಹೋಗದೆ ಮನೆಯಲ್ಲಿದ್ದ ಮಕ್ಕಳನ್ನು ಎಲ್ಲಡೆ ಹುಡುಕಾಟ ನಡೆಸಿದ್ದು ಪತ್ತೆಯಾಗದೆ ಇದ್ದಾಗ ಹೊಂಡದಲ್ಲಿ ಹುಡುಕಾಟ ನಡೆಸಿದ್ದು, ಮಕ್ಕಳಿಬ್ಬರು ಹೊಂಡದ ತಳ ಭಾಗದಲ್ಲಿ ಪತ್ತೆಯಾಗಿದ್ದಾರೆ. ನಂತರ ಮಕ್ಕಳಿಬ್ಬರನ್ನು ಹೊರ ತೆಗೆದಿದ್ದಾರೆ. ಈ ಘಟನೆ ಕಂಡ ಇಡೀ ಗ್ರಾಮಸ್ಥರು ಕಣ್ಣೀರು ಹರಿಸಿದ್ದಾರೆ.
ಅಧಿಕಾರಿಗಳು ನಿರ್ಲಕ್ಷ್ಯದಿಂದ ಕೃಷಿ ಹೊಂಡಗಳನ್ನು ನಿರ್ಮಿಸುವಾಗ ಹೊಂಡದ ಸುತ್ತಲು ರಕ್ಷಣೆ ಬೇಲಿಯನ್ನು ನಿರ್ಮಿಸಬೇಕು ಎಂಬ ಸರಕಾರ ಆದೇಶವಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನಕ್ಕೆ ಅಮಾಯಕ ಮಕ್ಕಳಿಬ್ಬರು ಬಲಿಯಾಗಿರುವುದು ದುರಂತವೇ ಸರಿ. ಕೃಷಿ ಹೊಂಡವನ್ನು ತುಂಬಾ ಆಳಕ್ಕೆ ತೊಡುವ ಕಾರಣ ಚಿಕ್ಕ ವಯಸ್ಸಿನ ಮಕ್ಕಳು ಬಿದ್ದರೂ ಮೇಲೆ ಬಂದು ಪ್ರಾಣ ಉಳಿಸಿಕೊಳ್ಳಲು ಆಗಲ್ಲ.ಹೊಂಡದ ಒಂದು ಬದಿಯಲ್ಲಿ ರಕ್ಷಣೆಗಾಗಿ ಒಂದು ಹಗ್ಗ ಅಥವಾ ಗಾಳಿ ತುಂಬಿದ ರಬ್ಬರ ಟ್ಯೂಬ್ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು ಮನವಿ ಮಾಡಿದ್ದಾರೆ.





