ತಮಿಳುನಾಡು ಬಿಜೆಪಿ ಮುಖಂಡನ ಹತ್ಯೆ
ಚೆನ್ನೈ: ತಮಿಳುನಾಡು ಬಿಜೆಪಿಯ ಅಲ್ಪಸಂಖ್ಯಾತ ವಿಭಾಗದ ನಾಯಕನನ್ನು ಮಂಗಳವಾರ ಚೆನ್ನೈನಲ್ಲಿ ಗ್ಯಾಂಗ್ನೊಂದು ಹತ್ಯೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಬಾಲಚಂದರ್ (30) ಎಂದು ಗುರುತಿಸಲಾಗಿದ್ದು, ಭಾರತೀಯ ಜನತಾ ಪಕ್ಷದ ಪರಿಶಿಷ್ಟ ಜಾತಿ ವಿಭಾಗದ ಚೆನ್ನೈ ಸೆಂಟ್ರಲ್ ಜಿಲ್ಲಾ ಕಾರ್ಯದರ್ಶಿಯಾಗಿದ್ದರು.
ಸ್ಥಳೀಯ ವರದಿಗಳ ಪ್ರಕಾರ, ಚಿಂತಾದ್ರಿಪೇಟೆಯಲ್ಲಿ ಬಾಲಚಂದರ್ ಅಂಗಡಿಯಲ್ಲಿದ್ದಾಗ ಮಂಗಳವಾರ ಸಂಜೆ 7:30 ರ ಸುಮಾರಿಗೆ ಈ ಘಟನೆ ನಡೆದಿದೆ.
ಇಲ್ಲಿನ ಚಿಂತದ್ರಿಪೇಟ್ನಲ್ಲಿ ಬಾಲಚಂದರ್ ವಾಸವಿದ್ದರು. ಇದೇ ಪ್ರದೇಶದ ನಿವಾಸಿಗಳಾದ ಮೋಹನ್ಮತ್ತು ಈತನ ಮಗ ಪ್ರದೀಪ್ ಎಂಬುವವರೊಂದಿಗೆ ಕಲಹ ಉಂಟಾಗಿತ್ತು. ಅಲ್ಲದೇ ಬಾಲಚಂದರ್ ಅವರಿಗೆ ಜೀವ ಬೆದರಿಕೆಯೂ ಇತ್ತು. ಹೀಗಾಗಿ ಮಗೆ ಪೊಲೀಸ್ ಭದ್ರತೆ ಬೇಕೆಂದು ಅಧಿಕಾರಿಗಳಲ್ಲಿ ಮನವಿಮಾಡಿದ್ದರು.
ಅಂತೆಯೇ ಅವರಿಗೆ ಗನ್ಮ್ಯಾನ್ ಒದಗಿಸಲಾಗಿತ್ತು. ಆದರೆ ಈ ಗನ್ಮ್ಯಾನ್ ಟೀ ಕುಡಿಯಲೆಂದು ಹೋದಾಗ ಬಾಲಚಂದರ್ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಚೆನ್ನೈಪೊಲೀಸ್ ಆಯುಕ್ತ ಶಂಕರ್ ಜಿವಾಲ್, ಹಳೆಯ ವೈಷಮ್ಯದಿಂದ ಬಾಲಚಂದರ್ ಕೊಲೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.




