ಹೆದ್ದಾರಿಯ ಸುರಕ್ಷಾ ತಡೆಗೋಡೆ ಕುಸಿತ: ಸಂಚಾರಕ್ಕೆ ಅಡ್ಡಿ, ವಾಹನ ಸವಾರರ ಪರದಾಟ
ನವದೆಹಲಿ: ಉತ್ತರಾಖಂಡದ ಯಮುನೋತ್ರಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಯ ಸುರಕ್ಷಾ ತಡೆಗೋಡೆ ಕುಸಿದು ಬಿದ್ದ ಪರಿಣಾಮ ಸುಮಾರು ಹತ್ತು ಸಾವಿರ ಮಂದಿ ಸಂಚಾರಕ್ಕೆ ಅಡ್ಡಿಯುಂಟಾಗಿ ಪರದಾಡುವಂತಾಗಿದೆ ಎಂದು ವರದಿ ತಿಳಿಸಿದೆ.
ಈ ರಸ್ತೆಯಲ್ಲಿನ ಸಂಚಾರವನ್ನು ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ವಿವಿಧ ಸ್ಥಳಗಳಲ್ಲಿ ಸುಮಾರು ಹತ್ತು ಸಾವಿರ ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ ಎಂದು ವರದಿ ವಿವರಿಸಿದೆ.
ರಾಣಾಚಟ್ಟಿ ಪ್ರದೇಶದ ಸಮೀಪ ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯ ಸುರಕ್ಷಾ ತಡೆಗೋಡೆ ಶನಿವಾರ (ಮೇ 21) ಕುಸಿದು ಬಿದ್ದ ಘಟನೆಯಿಂದಾಗಿ ಪ್ರವಾಸಿಗರ ವಾಹನ ಮತ್ತು ಇತರ ಭಾರೀ ಗಾತ್ರದ ವಾಹನಗಳು ಮುಂದೆ ಚಲಿಸಲಾಗದೆ ಜನರು ಸಂಕಷ್ಟದಲ್ಲಿ ಸಿಲುಕಿಕೊಂಡಂತಾಗಿದೆ ಎಂದು ಮೂಲಗಳು ತಿಳಿಸಿವೆ




