ಕಚೇರಿಯಲ್ಲಿ ಅಧಿಕಾರಿಗಳ ಕೊರತೆ:
ವಿಟ್ಲ ಪಟ್ಟಣ ಪಂಚಾಯತ್ ಮುಂಬಾಗ ಕಾಂಗ್ರೆಸ್ ಪ್ರತಿಭಟನೆ
ವಿಟ್ಲ: ಅಧಿಕಾರಿಗಳಿಲ್ಲದ ವಿಟ್ಲ ಪಟ್ಟಣ ಪಂಚಾಯತ್ನಲ್ಲಿ ಕಳೆದ ಮೂರು ತಿಂಗಳಿಂದ ಸಾರ್ವಜನಿಕರಿಗೆ ಯಾವುದೇ ಕೆಲಸ ಆಗುತ್ತಿಲ್ಲ ಎಂದು ಆರೋಪಿಸಿ ವಿಟ್ಲ ನಗರ ಕಾಂಗ್ರೆಸ್ ಪ್ರತಿಭಟನೆ ನಡೆಸಿತು.
ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ. ಅವರು ಮಾತನಾಡಿ, ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆ ನಡೆದು ಜನಪ್ರತಿನಿಧಿಗಳ ಆಯ್ಕೆಯಾಗಿ ನಾಲ್ಕೂವರೆ ತಿಂಗಳು ಕಳೆದುಹೋಯಿತು. ಇನ್ನೂ ಆಡಳಿತ ವ್ಯವಸ್ಥೆಯನ್ನು ಸರಕಾರ ಮಾಡಿಲ್ಲ. ಬಿಜೆಪಿ ಸದಸ್ಯರ ಬಹುಮತವಿದ್ದು, ಅಭಿನಂದನೆ, ಸಮ್ಮಾನಗಳಲ್ಲೇ ಕಾಲ ಕಳೆಯುತ್ತಿದ್ದಾರೆ. ಬಿಜೆಪಿ ಸರಕಾರ ಪಟ್ಟಣ ಪಂಚಾಯತ್ ಆಡಳಿತ ವ್ಯವಸ್ಥೆಗೆ ಇನ್ನೂ ಚಾಲನೆ ನೀಡಿಲ್ಲ, ಇಲ್ಲಿ ಅಧಿಕಾರಿಗಳಿಲ್ಲ. ಅವ್ಯವಸ್ಥೆಯ ಆಗರದ ವಿರುದ್ಧ ಇದು ನಗರ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಸಾಂಕೇತಿಕ ಪ್ರತಿಭಟನೆ. ತತ್ಕ್ಷಣ ವ್ಯವಸ್ಥೆಯನ್ನು ಸರಿಪಡಿಸದೇ ಇದ್ದರೆ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಉಗ್ರ ಪ್ರತಿಭಟನೆ ಮಾಡಲಿವೆ ಎಂದು ಹೇಳಿದರು.
ಜಿ.ಪಂ.ಮಾಜಿ ಸದಸ್ಯ ಎಂ.ಎಸ್.ಮಹಮ್ಮದ್ ಅವರು ಮಾತನಾಡಿ, ವಿಟ್ಲ ಪಟ್ಟಣ ಪಂಚಾಯತ್ ನರಕವಾಗಿದೆ. ಈ ಪಂಚಾಯತ್ನಲ್ಲಿ ಆರೋಗ್ಯ, ಕಂದಾಯ, ಅಭಿಯಂತೆ ಇನ್ನಿತರ ಹುದ್ದೆಗಳೆಲ್ಲವೂ ಖಾಲಿಯಿದೆ. ಈ ಪಂಚಾಯತ್ಗೆ ಆಗಮಿಸಿದ ನಾಗರಿಕರೆಲ್ಲರೂ ಕಂಗಾಲಾಗಿದ್ದಾರೆ.
ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷ ವಿ.ಕೆ.ಎಂ.ಅಶ್ರಫ್, ಪ.ಪಂ.ಸದಸ್ಯರು, ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.