ರೋಟರಿ ಕ್ಲಬ್ ಸಿದ್ಧಕಟ್ಟೆ ಫಲ್ಗುಣಿ: ಜಿಲ್ಲಾ ಗವರ್ನರ್ ರವೀಂದ್ರ ಭಟ್ ಭೇಟಿ
ಬಂಟ್ವಾಳ: ಪರಸ್ಪರ ಸೇವೆ ಹಾಗೂ ಸಹಕಾರದಿಂದ ಜೀವನ ಸಾರ್ಥಕ್ಯವನ್ನು ಪಡೆಯಬಹುದು ಎಂದು ರೊ. ರವೀಂದ್ರ ಭಟ್ ಅಭಿಪ್ರಾಯಪಟ್ಟರು. ರೋಟರಿ ಕ್ಲಬ್ ಸಿದ್ಧಕಟ್ಟೆ ಫಲ್ಗುಣಿಯ ಜಿಲ್ಲಾ ಗವರ್ನರ್ ಭೇಟಿ ಕಾರ್ಯಕ್ರಮವನ್ನುದ್ದೇಶಿಸಿ ಅವರು ಈ ಮಾತುಗಳನ್ನಾಡಿದರು.


ಸಿದ್ಧಕಟ್ಟೆಯ ಸೈಂಟ್ ಪ್ಯಾಟ್ರಿಕ್ ಚರ್ಚ್ ಹಾಲ್ ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶೈಕ್ಷಣಿಕವಾಗಿ ಉತ್ತಮ ಸಾಧನೆಗೈದ ಕು.ತೇಜಸ್ವಿ, ನವ್ಯ, ಸ್ವಾತಿ ಇವರನ್ನು ಸನ್ಮಾನಿಸಲಾಯಿತು. ರೋಟರಿಯ ಸಾಧಕರನ್ನು ಅಭಿನಂದಿಸಲಾಯಿತು. ಗುಂಡೂರಿಯ ಸೇವಾಶ್ರಮಕ್ಕೆ ಬಟ್ಟೆ ಹಾಗೂ ಬೆಡ್ ಶೀಟ್ ಗಳನ್ನು ವಿತರಿಸಲಾಯಿತು. ಆರಂಬೋಡಿ ಗ್ರಾಮ ಪಂಚಾಯತ್ ಗೆ ಕುರ್ಚಿಗಳನ್ನು ನೀಡಲಾಯಿತು. ಟೈಲರಿಂಗ್ ಮೆಷಿನ್, ಪೋಸ್ಟಲ್ ವಿಮೆ ಹಸ್ತಾಂತರ, ಟೈಲರಿಂಗ್ ಹಾಗೂ ಫ್ಯಾಷನ್ ಡಿಸೈನರ್ ಕೋರ್ಸ್ ಉದ್ಘಾಟನೆ ನೆರವೇರಿತು.
ಕ್ಲಬ್ ಅಡ್ವೈಸರ್ ರೊ.ಜೆರಾಲ್ಡ್ ಡಿಕೋಸ್ತ, ಝೋನಲ್ ಸೆಕ್ರೆಟರಿ ರೊ. ಜಯರಾಮ್ ರೈ, ಅಸಿಸ್ಟೆಂಟ್ ಡೈರೆಕ್ಟರ್ ರೊ.ಸುರೇಂದ್ರ ಕಿಣಿ, ಡಿಸ್ಟ್ರಿಕ್ಟ್ ಗವರ್ನರ್ ರೊ. ಎಂ.ಪಿ.ಎಚ್.ಎಫ್ ರವೀಂದ್ರ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೋಟೇರಿಯನ್ ಗಳಾದ ಶಿವಯ್ಯ ಎಸ್ ಎಲ್, ಮೋಹನ್ ಜಿ ಮೂಲ್ಯ, ಎಸ್.ವಿ. ಆಚಾರ್ ಸನ್ಮಾನ ಪತ್ರ ವಾಚಿಸಿದರು. ಹೊಸ ಸದಸ್ಯರಾಗಿ ಸೇರ್ಪಡೆಗೊಂಡ ಪ್ರವೀಣ್ ಕ್ರಾಸ್ತರನ್ನು ಜೇಸನ್ ಫರ್ನಾಂಡಿಸ್ ಸಭೆಗೆ ಪರಿಚಯಿಸಿದರು. ರೋಟರಿ ಸಿದ್ಧಕಟ್ಟೆಯ ಅಧ್ಯಕ್ಷರಾದ ಮೈಕಲ್ ಡಿಕೋಸ್ತ ಸ್ವಾಗತಿಸಿ, ಕೋಶಾಧಿಕಾರಿ ಗಣೇಶ್ ಶೆಟ್ಟಿ ವಂದಿಸಿದರು. ಕಾರ್ಯದರ್ಶಿಗಳಾದ ರಾಜೇಶ್ ನೆಲ್ಯಾಡಿ ವರದಿ ವಾಚಿಸಿದರು. ರೊ.ದಿನೇಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.




