ಹಿರಿಯಡ್ಕ: ತಾಯಿ ಮಗಳ ಹತ್ಯೆ ಪ್ರಕರಣ: ಶಿವಮೊಗ್ಗ ಮೂಲದ ಯುವಕನ ಬಂಧನ
ಉಡುಪಿ: ಹಿರಿಯಡ್ಕ ಠಾಣೆ ವ್ಯಾಪ್ತಿಯಲ್ಲಿ ನಡೆದ ತಾಯಿ, ಮಗಳ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಶಿವಮೊಗ್ಗ ಮೂಲದ ಯುವಕನನ್ನು ಬಂಧಿಸಿದ್ದಾರೆ.
ಆತ್ರಾಡಿ ಗ್ರಾಮದ ಮದಗ ಮುಳ್ಳುಗುಜ್ಜೆ ಎಂಬಲ್ಲಿ ಚೆಲುವಿ (28) ಮತ್ತು ಆಕೆಯ ಹತ್ತು ವರ್ಷದ ಮಗಳನ್ನು ಮೇ 8ರಂದು ರಾತ್ರಿ ಯಾರೋ ಅಪರಿಚಿತರು ಕತ್ತು ಹಿಸುಕಿ ಕೊಲೆಗೈದಿದ್ದರು. ಈ ಬಗ್ಗೆ ಮೃತಳ ತಂಗಿ ದೇವಿ ನೀಡಿದ ದೂರಿನಂತೆ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಖಚಿತ ಸುಳಿವು ಇಲ್ಲದ ಪ್ರಕರಣದಲ್ಲಿ ಕೆಲವು ಮಾಹಿತಿಗಳನ್ನು ಆಧರಿಸಿ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ತನಿಖೆ ಕೈಗೊಂಡಿದ್ದರು. ಆಕೆಯ ಮನೆಗೆ ಆಗಾಗ ಬಂದು ಹೋಗುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ವಿಚಾರ ತಿಳಿದುಬಂದಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಬೊಮ್ಮನಕಟ್ಟೆ ನಿವಾಸಿ ಹರೀಶ (29) ಎಂಬಾತ ಬಂಧಿತ.
ಹರೀಶ ಮೃತ ಚೆಲುವಿಯ ದೂರದ ಸಂಬಂಧಿಯಾಗಿದ್ದು ಈತನಿಗೆ ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದ. ಈ ನಡುವೆ, ಚೆಲುವಿ ಗಂಡನಿಂದ ದೂರವಾಗಿ ಮಕ್ಕಳ ಜೊತೆ ವಾಸವಿದ್ದುದನ್ನು ತಿಳಿದು ಆಕೆಯ ಮನೆಗೆ ಬರಲಾರಂಭಿಸಿದ್ದ. ಅಲ್ಲದೆ, ಆಕೆಯನ್ನು ಮದುವೆಯಾಗಲು ಒತ್ತಾಯಿಸುತ್ತಿದ್ದ. ಚೆಲುವಿ ಬೇರೆ ಗಂಡಸರ ಜೊತೆ ಫೋನ್ ನಲ್ಲಿ ಸಂಪರ್ಕ ಹೊಂದಿದ್ದಾಳೆಂದು ಚೆಲುವಿ ಗಲಾಟೆ ಮಾಡುತ್ತಿದ್ದ. ಇದೇ ಸಂಶಯದಿಂದ ಮೇ 8 ರಂದು ಆಕೆಯ ಮನೆಗೆ ಬಂದಿದ್ದ ಹರೀಶ ಗಲಾಟೆ ಮಾಡಿದ್ದ. ರಾತ್ರಿ ಆಕೆಯ ಮನೆಗೆ ಬಂದು ಊಟ ಮಾಡಿ ಮಲಗಿದ್ದ ಆರೋಪಿ ನಂತರ ಚೆಲುವಿ ಮಲಗಿದ್ದಲ್ಲಿಗೆ ಹೋಗಿ ಶಾಲಿನಿಂದ ಕುತ್ತಿಗೆ ಬಿಗಿದು ಆಕೆಯನ್ನು ಕೊಲೆ ಮಾಡಿದ್ದ. ಈ ವಿಚಾರವನ್ನು ಮಗಳು ಪೊಲೀಸರಿಗೆ ತಿಳಿಸಬಹುದು ಎಂಬ ಭಯದಲ್ಲಿ ಆನಂತರ ಹತ್ತು ವರ್ಷದ ಬಾಲಕಿಯನ್ನೂ ನಿದ್ದೆಯಲ್ಲಿದ್ದಾಗಲೇ ಕತ್ತು ಹಿಸುಕಿ ಕೊಲೆಗೈದಿದ್ದ.
ಕೃತ್ಯದ ಬಳಿಕ ಚೆಲುವಿಯ ಕುತ್ತಿಗೆಯಲ್ಲಿದ್ದ ಸುಮಾರು 50 ಸಾವಿರ ಮೌಲ್ಯದ ಚಿನ್ನದ ಸರ ಹಾಗೂ ಆಕೆ ಉಪಯೋಗಿಸುತ್ತಿದ್ದ ಒಪ್ಪೋ ಮೊಬೈಲ್ ಫೋನನ್ನು ಕಿತ್ತುಕೊಂಡು ರಾತ್ರಿಯೇ ಪರಾರಿಯಾಗಿದ್ದ. ತನಿಖೆ ನಡೆಸಿದ ಪೊಲೀಸರು ಮುನ್ನಾ ದಿನ ಚೆಲುವಿಯ ಮನೆಗೆ ಬಂದಿದ್ದ ಆಕೆಯ ತಾಯಿ ಬಳಿ ಮಾಹಿತಿ ಕೇಳಿದ್ದಾರೆ. ಅಲ್ಲದೆ, ಮೃತ ಚೆಲುವಿಯ ತಂಗಿಯಿಂದಲೂ ಮಾಹಿತಿ ಸಂಗ್ರಹಿಸಿದ್ದರು. ಈ ವೇಳೆ, ಭದ್ರಾವತಿ ಮೂಲದ ವ್ಯಕ್ತಿಯ ಮಾಹಿತಿ ಸಿಕ್ಕಿದ್ದರಿಂದ ಆತನನ್ನು ವಶಕ್ಕೆ ಪಡೆದಿದ್ದರು. ಹಿರಿಯಡ್ಕ ಠಾಣೆ ಪಿಎಸ್ಐ ಅನಿಲ್ ಮಾದರ, ಕೋಟ ಠಾಣೆ ಪಿಎಸ್ಐ ಮಧು ಬಿ.ಇ, ಪ್ರೊಬೇಶನರಿ ಪಿಎಸ್ಐ ಮಂಜುನಾಥ ಮರಬದ, ರವಿ ಬಿ. ಕಾರಗಿ, ಎಎಸ್ಐ ಕೃಷ್ಣಪ್ಪ, ಪ್ರದೀಪ ನಾಯಕ, ವಾಸುದೇವ ಪಿ., ರವೀಂದ್ರ ಎಚ್., ಶೇಖರ ಸೇರಿಗಾರ, ಜಯಂತ, ಗಂಗಪ್ಪ ಮತ್ತಿತರರಿದ್ದ ತಂಡ ಎರಡೇ ದಿನದಲ್ಲಿ ಆರೋಪಿಯನ್ನು ಬಂಧಿಸಿ ಕೊಲೆ ಪ್ರಕರಣವನ್ನು ಭೇದಿಸಿದೆ.




