ದೇಶದಲ್ಲಿಯೇ ಮಾದರಿ ಶಾಲೆಗಳನ್ನಾಗಿ ಗುಜರಾತ್ ಶಾಲೆಗಳನ್ನು ಅಭಿವೃದ್ದಿ ಪಡಿಸುತ್ತೇವೆ: ಅರವಿಂದ ಕೇಜ್ರಿವಾಲ್
ಭರೂಚ್: ದೇಶದಲ್ಲಿಯೇ ಮಾದರಿ ಶಾಲೆಗಳನ್ನಾಗಿ ಗುಜರಾತ್ ಶಾಲೆಗಳನ್ನು ಅಭಿವೃದ್ದಿಪಡಿಸುತ್ತೇವೆ. ಮಾತು ತಪ್ಪಿದರೆ ನಮ್ಮನ್ನು ಇಲ್ಲಿಂದ ಹೊರ ಹಾಕಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಗುಜರಾತ್ನಲ್ಲಿ ಬದಲಾವಣೆ ತರುವ ವಿಷಯವಾಗಿ ಇಂದು ಮಾತನಾಡಿದ ಅವರು, ನಮಗೆ ಗುಜರಾತ್ನಲ್ಲಿ ಅವಕಾಶ ನೀಡಿ. ದೆಹಲಿ, ಪಂಜಾಬ್ನಲ್ಲಿ ಆಡಳಿತ ಮಾದರಿ ಯಶಸ್ವಿಯಾಗಿದೆ. ಅದೇ ಮಾದರಿಯಲ್ಲಿ ಗುಜರಾತ್ನ್ನೂ ಅಭಿವೃದ್ದಿ ಮಾಡುತ್ತೇವೆ. ಶಾಲೆಗಳ ಸ್ಥಿತಿ ಸುಧಾರಿಸದಿದ್ದರೆ ನೀವೇ ನಮ್ಮನ್ನು ಹೊರಹಾಕಿ ಎಂದು ಹೇಳಿದರು.
ಭರೂಚ್ನಲ್ಲಿ ಶಾಲೆಗಳ ಸ್ಥಿತಿ ತುಂಬಾ ಹದಗೆಟ್ಟಿದೆ. 6 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚಿರುವುದೇ ಇದಕ್ಕೆ ಸಾಕ್ಷಿ. ಕೆಲವು ಶಾಲೆಗಳಲ್ಲಿ ಮೂಲಸೌಕರ್ಯಗಳೇ ಇಲ್ಲ. ದೆಹಲಿ ಮಾದರಿಯಲ್ಲಿ ಇಲ್ಲಿನ ಶಾಲೆ ಬದಲಾಯಿಸಿ, ಮಕ್ಕಳ ಭವಿಷ್ಯ ರೂಪಿಸಲಾಗುವುದು ಎಂದವರು ಭರವಸೆ ನೀಡಿದರು.
ಪರೀಕ್ಷೆ ವೇಳೆ ಪ್ರಶ್ನೆಪತ್ರಿಕೆ ಸೋರಿಕೆ ಮಾಡುವುದರಲ್ಲಿ ಬಿಜೆಪಿಯದ್ದು ವಿಶ್ವದಾಖಲೆಯಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗಟ್ಟಿ ಒಂದಾದರೂ ಪರೀಕ್ಷೆ ನಡೆಸಿ ಎಂಬುದಾಗಿ ಸಿಎಂ ಭೂಪೇಂದ್ರ ಪಟೇಲ್ ಅವರಿಗೆ ಸವಾಲು ಹಾಕುತ್ತೇನೆ ಎಂದರು.




