ಕೃಷಿ ಹೊಂಡದಲ್ಲಿ ಮುಳುಗಿ ಮೂವರು ಬಾಲಕರ ದಾರುಣ ಸಾವು
ಚಿಕ್ಕಬಳ್ಳಾಪುರ: ಕೃಷಿ ಹೊಂಡದಲ್ಲಿ ಮುಳುಗಿ ಮೂವರು ಬಾಲಕರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹಂಪಸಂದ್ರ ಬಳಿ ನಡೆದಿದೆ.
ಹಂಪಸಂದ್ರ ಗ್ರಾಮದ ಲಿಖಿತ್ (16), ಮನೋಜ್ (15) ಹಾಗೂ ರಾಜೇಶ್ (16) ಮೃತಪಟ್ಟ ಬಾಲಕರು.
ಬೇಸಿಗೆ ರಜೆಯ ಹಿನ್ನೆಲೆ ಬೆಂಗಳೂರಿನ ಮನೋಜ್ ಹಂಪಸಂದ್ರದ ಅಜ್ಜಿ ಮನೆಗೆ ಬಂದಿದ್ದು, ನೀರಿನಲ್ಲಿ ಆಟವಾಡಲು ಗ್ರಾಮದ ಜಯಮ್ಮ ಎಂಬುವವರ ತೋಟದ ಕೃಷಿ ಹೊಂಡಕ್ಕೆ ತೆರಳಿದ್ದಾರೆ.
ಆ ಸಂದರ್ಭ ಆಟಕ್ಕೆ ತೆರಳಿದ್ದ ಮೂವರು ಬಾಲಕರು ನೀರಿನಲ್ಲಿ ಮುಳುಗಿದ್ದು ಇನ್ನು ಉಳಿದ ಮೂವರು ಬಾಲಕರು ಪ್ರಾಣಾಪಾಯದಿಂದ ಪಾರಾಗಿ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ.
ವಿಷಯ ತಿಳಿದ ಗ್ರಾಮಸ್ಥರು ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಗಳನ್ನಮು ಕರೆಸಿದರೂ ಮೃತದೇಹಗಳು ಸಿಗದ ಹಿನ್ನೆಲೆ ಜೆಸಿಬಿ ಮೂಲಕ ಕೃಷಿ ಹೊಂಡವನ್ನು ಒಡೆದು ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ.
ಸದ್ಯ ಸ್ಥಳದಲ್ಲಿ ಪೋಷಕರ ಅಳಲು, ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಗೌರಿಬಿದನೂರು ಸರ್ಕಲ್ ಇನ್ಸ್ಪೆಕ್ಟರ್ ಶಶಿಧರ್ ಹಾಗೂ ಗ್ರಾಮಾಂತರ ಠಾಣೆ ಸಬ್ ಇನ್ಸ್ಪೆಕ್ಟರ್ ವಿಜಯ್ ಕುಮಾರ್ ಮತ್ತು ಲಲಿತಮ್ಮ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.




