ಆಟೋರಿಕ್ಷಾ ಚಾಲಕನನ್ನು ಕೊಂದು ಮೃತದೇಹದೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ ವ್ಯಕ್ತಿ
ಚೆನ್ನೈ: ಆಟೋ ರಿಕ್ಷಾ ಚಾಲಕನ್ನು ಮದ್ಯದ ಬಾಟಲಿಯಿಂದ ಚುಚ್ಚಿ ಕೊಂದು ನಂತರ ಶವದೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ವಾಟ್ಸಾಪ್ ಗ್ರೂಪ್ ನಲ್ಲಿ ಫೋಟೊ ಕಳುಹಿಸಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಚೆನ್ನೈನ ನ್ಯೂ ಮನಾಲಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ.
ಕೊಲೆಯಾದ ರಿಕ್ಷಾ ಚಾಲಕನನ್ನು ರವಿಚಂದ್ರನ್ (32 ವ) ಎಂದು ಗುರುತಿಸಲಾಗಿದೆ. ಹಳೇಯ ವೈಷಮ್ಯದ ಕಾರಣದಿಂದ ಈ ಕೊಲೆ ನಡೆದಿದೆ.
ಬುಧವಾರ ರಾತ್ರಿ ಈ ಕೊಲೆ ನಡೆದಿದ್ದು, ಗುರುವಾರ ಬೆಳಗ್ಗೆ ವಾಟ್ಸಾಪ್ ಗ್ರೂಪ್ ನಲ್ಲಿ ಪೋಸ್ಟ್ ಮಾಡಿದ ಫೋಟೋ ಆಧರಿಸಿ ನಾಲ್ವರನ್ನು ಬಂಧಿಸಲಾಗಿದೆ. ಮಧನ್ ಕುಮಾರ್ (31), ಧನುಷ್ (19), ಜಯಪ್ರಕಾಶ್ (18) ಮತ್ತು ಭರತ್ (19) ಎಂಬ ನಾಲ್ವರು ಆರೋಪಿಗಳನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ರವಿಚಂದ್ರನ್ ಕೆಲ ದಿನಗಳ ಹಿಂದೆ ಆರೋಪಿಗಳಲ್ಲಿ ಒಬ್ಬನಾದ ಮದನ್ ಎಂಬಾತನ ಜೊತೆ ಜಗಳ ಮಾಡಿಕೊಂಡಿದ್ದ. ರವಿಚಂದ್ರನ್ ಅವರನ್ನು ಬುಧವಾರ ನ್ಯೂ ಮನಾಲಿ ಪಟ್ಟಣದ ಆಟದ ಮೈದಾನದಲ್ಲಿ ಮದನ್ ಅವರು ಮದ್ಯದ ಪಾರ್ಟಿಗೆ ಆಹ್ವಾನಿಸಿದ್ದ. ಅವರು ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಬಯಸಿದ್ದರು ಎಂದು ವರದಿಯಾಗಿದೆ.




