ಕೋಪದಿಂದ ಓಲಾ ಇಲೆಕ್ಟ್ರಿಕ್ ಸ್ಕೂಟರ್ ಗೆ ಬೆಂಕಿ ಹಚ್ಚಿದ ಭೂಪ
ಚೆನ್ನೈ: ತಮಿಳುನಾಡಿನ ತಿರುಪತ್ತೂರಿನ ನಿವಾಸಿ ಪೃಥಿವಿರಾಜ್ ಅವರು ಹಲವಾರು ತೊಂದರೆಗಳನ್ನು ಅನುಭವಿಸಿದ ನಂತರ ಉದ್ದೇಶಪೂರ್ವಕವಾಗಿ ತಮ್ಮ ಎಲೆಕ್ಟ್ರಿಕ್ ಸ್ಕೂಟರ್ ಗೆ ಬೆಂಕಿ ಹಚ್ಚಿದ್ದಾರೆ.
ಅಂಬೂರು ಬಳಿ ಆರ್ಥೋ ಮತ್ತು ನ್ಯೂರೋ ಕ್ಲಿನಿಕ್ ಅನ್ನು ನಿರ್ವಹಿಸುತ್ತಿರುವ ಪೃಥ್ವಿರಾಜ್ ಅವರು ಓಲಾ ಇ-ಬೈಕ್ ಖರೀದಿಸಿದ್ದಾರೆ.
ಪಕ್ಕದಲ್ಲಿ ವಾಹನ ನೋಂದಣಿ ಕಚೇರಿ ಇದ್ದರೂ ಓಲಾ ಅಧಿಕಾರಿಗಳು ಸ್ಕೂಟರ್ ನೋಂದಣಿ ಮಾಡಲು ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ಗುಡಿಯಾಟ್ಟಂಗೆ ಹೋಗಬೇಕು ಎಂದು ಹೇಳಿದ್ದಾರೆ ಎಂದು ಪೃಥ್ವಿರಾಜ್ ವಿಡಿಯೋದಲ್ಲಿ ಹೇಳಿದ್ದಾರೆ.
ಗುಡಿಯಾಟ್ಟಂ ಆರ್ಟಿಒ ನೋಂದಣಿ ಮಾಡಲು ನಿರಾಕರಿಸಿ, ಪೃಥ್ವಿರಾಜ್ ಅವರ ಮನೆ ಆರ್ಟಿಒ ಅಧಿಕಾರ ವ್ಯಾಪ್ತಿಯಲ್ಲಿಲ್ಲ ಎಂದರು. ಆದಾಗ್ಯೂ, ಅವರ ಸಂಕಟಗಳು ಅಲ್ಲಿಗೆ ಮುಗಿಯಲಿಲ್ಲ.
ಪ್ರಯಾಣದ ಮಧ್ಯೆ ಪೃಥ್ವಿರಾಜ್ ಸ್ಕೂಟರ್ ಕೆಟ್ಟು ನಿಂತಿದ್ದು, ರಸ್ತೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ . ಸೇವಾ ಕೇಂದ್ರಕ್ಕೆ ವಿಡಿಯೋ ಸಂದೇಶ ಕಳುಹಿಸಿದರೂ ಎರಡು ಗಂಟೆಗಳಾದರೂ ಯಾವುದೇ ಸಹಾಯ ಬಂದಿಲ್ಲ ಎಂದು ಹೇಳಿಕೊಂಡಿದ್ದಾರೆ. ಎಲ್ಲಾ ಕಿರಿಕಿರಿಗಳಿಂದ ಕೆರಳಿ ಕೋಪಗೊಂಡ ಪೃಥ್ವಿರಾಜ್ ಇ-ಬೈಕ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.




