February 4, 2026

ಸುಳ್ಯ: ಡಿ.ಕೆ. ಶಿವಕುಮಾರ್ ಗೆ ನಿಂದಿಸಿದ ಪ್ರಕರಣ: ಸುಳ್ಯ ನ್ಯಾಯಾಲಯ ಪ್ರಕಟಿಸಿದ ಜೈಲು ಶಿಕ್ಷೆ ಆದೇಶಕ್ಕೆ ತಡೆ

0
Screenshot_20220423-093947_Chrome.jpg

ಪುತ್ತೂರು: ಡಿ.ಕೆ. ಶಿವಕುಮಾರ್ ಅವರು ಇಂಧನ ಸಚಿವರಾಗಿದ್ದಾಗ, ಅವರಿಗೆ ಫೋನ್‌ ಕರೆ ಮಾಡಿ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಾರೆಯ ಸಾಯಿ ಗಿರಿಧರ್ ರೈ ಅವರಿಗೆ ಸುಳ್ಯ ನ್ಯಾಯಾಲಯ ಪ್ರಕಟಿಸಿದ ಜೈಲು ಶಿಕ್ಷೆ ಆದೇಶಕ್ಕೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಸುಳ್ಯ ನ್ಯಾಯಾಲಯದ ಆದೇಶದ ವಿರುದ್ಧ ಸಾಯಿ ಗಿರಿಧರ್ ರೈ ಅವರು ಪುತ್ತೂರಿನ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ‘ಸರ್ಕಾರಿ ಅಧಿಕಾರಿಗಳು, ಸಾರ್ವಜನಿಕ ಸೇವೆಯಲ್ಲಿರುವವರನ್ನು ಪ್ರಶ್ನೆ ಮಾಡುವುದು ಅಪರಾಧವಲ್ಲ’ ಎಂಬ ಕಕ್ಷಿದಾರರ ಪರ ವಕೀಲರ ವಾದವನ್ನು ಪುರಸ್ಕರಿಸಿದ ನ್ಯಾಯಾಲಯವು ಆದೇಶಕ್ಕೆ ತಡೆ ನೀಡಿದೆ. ಸಾಯಿ ಗಿರಿಧರ್ ರೈ ಅವರ ಪರವಾಗಿ ವಕೀಲ ಬಿ. ನರಸಿಂಹ ಪ್ರಸಾದ್ ವಾದ ಮಂಡಿಸಿದ್ದರು.

ಸುಳ್ಯ ತಾಲ್ಲೂಕಿನ ವಿದ್ಯುತ್ ಸಮಸ್ಯೆ ಕುರಿತಂತೆ ಗಿರಿಧರ ರೈ ಅವರು 2016ರ ಫೆ.28ರಂದು ಅಂದಿನ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಫೋನ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದರು.

ಈ ಸಂದರ್ಭ ಅವರು ಅವಾಚ್ಯ ಶಬ್ದಗಳನ್ನು ಬಳಸಿದ್ದರು ಎಂದು ಆಪಾದಿಸಲಾಗಿತ್ತು. ಇದಕ್ಕೆ ಸಂಬಂಧಿಸಿ ಸಚಿವರ ಪರವಾಗಿ ಮೆಸ್ಕಾಂ ಅಧಿಕಾರಿಗಳು ಬೆಳ್ಳಾರೆ ಠಾಣೆಗೆ ದೂರು ನೀಡಿದ್ದರು. ನಿಂದನೆ, ಜೀವ ಬೆದರಿಕೆ, ಮಾನಹಾನಿ, ಕರ್ತವ್ಯಕ್ಕೆ ಅಡ್ಡಿ ಆರೋಪದಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಸುಳ್ಯ ನ್ಯಾಯಾಲಯ, ಏ.18ರಂದು ಆದೇಶ ಪ್ರಕಟಿಸಿ, ಸಾಯಿ ಗಿರಿಧರ್ ರೈ ಅವರಿಗೆ 4 ಪ್ರಕರಣಗಳಲ್ಲಿ ತಲಾ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿತ್ತು.

Leave a Reply

Your email address will not be published. Required fields are marked *

error: Content is protected !!