ತಲಪಾಡಿ: ಹ್ಯಾಂಡ್ ಬ್ರೇಕ್ ಹಾಕಿ ಪಾರ್ಕ್ ಮಾಡಿದ್ದ ಲಾರಿ: ಹಿಂದಕ್ಕೆ ಚಲಿಸಿ, ರಿಕ್ಷಾ, ಬೈಕ್ ಗೆ ಡಿಕ್ಕಿ
ಮಂಗಳೂರು: ಹ್ಯಾಂಡ್ ಬ್ರೇಕ್ ಹಾಕಿ ಪಾರ್ಕ್ ಮಾಡಿದ್ದ ಬೃಹತ್ ಕಂಟೇನರ್ ಲಾರಿಯೊಂದು ಡ್ರೈವರ್ ಇಲ್ಲದೆ ಹಿಂದಕ್ಕೆ ಚಲಿಸಿದ ಘಟನೆ ತಲಪಾಡಿ ಟೋಲ್ ಗೇಟ್ ನಲ್ಲಿ ನಡೆದಿದ್ದು, ಟೋಲ್ ಸೆಕ್ಯುರಿಟಿ ಗಾರ್ಡ್ ಸಿಬಂದಿ ಸಹಿತ ಬೈಕಿನಲ್ಲಿ ತೆರಳುತ್ತಿದ್ದ ದಂಪತಿ ಪವಾಡಸದೃಶ ಅಪಾಯದಿಂದ ಪಾರಾಗಿದ್ದಾರೆ.
ಮಂಗಳವಾರ ರಾತ್ರಿ ತಲಪಾಡಿ ಟೋಲ್ ಗೇಟ್ ಬಳಿ ಘಟನೆ ನಡೆದಿದೆ. ದೆಹಲಿಯಿಂದ ಕೊಚ್ಚಿಗೆ ತೆರಳುತ್ತಿದ್ದ ಗಣಪತಿ ಲಾಜಿಸ್ಟಿಕ್ಸ್ ಸಂಸ್ಥೆಗೆ ಸೇರಿದ ಕಂಟೇನರ್ ಲಾರಿಯನ್ನು ಚಾಲಕ ಜೈವೀರ್ ಸಿಂಗ್ (60) ತಲಪಾಡಿ ಟೋಲ್ ದಾಟಿ ರಸ್ತೆ ಬದಿ ನಿಲ್ಲಿಸಿದ್ದ. ಲಾರಿಯನ್ನು ಹ್ಯಾಂಡ್ ಬ್ರೇಕ್ ಹಾಕಿ ನಿಲ್ಲಿಸಿ ಕ್ಯಾಂಟೀನಲ್ಲಿ ಚಹಾ ಕುಡಿಯುತ್ತಿದ್ದಾಗ ಹ್ಯಾಂಡ್ ಬ್ರೇಕ್ ಕೈಕೊಟ್ಟು ಲಾರಿ ಡ್ರೈವರ್ ಇಲ್ಲದೆ ಹಿಂದಕ್ಕೆ ಚಲಿಸಿದೆ. ಲಾರಿ ಹಿಂದಕ್ಕೆ ಚಲಿಸುತ್ತಾ ಹೋಗಿ ರಿಕ್ಷಾ ಹಾಗೂ ಬೈಕ್ ಒಂದಕ್ಕೆ ಡಿಕ್ಕಿ ಹೊಡೆದಿದೆ. ಅಲ್ಲದೆ, ಟೋಲ್ ಗೇಟ್ನಲ್ಲಿರುವ ಸೆನ್ಸರ್ ಗೇಟ್ ಮತ್ತು ಸೆಕ್ಯುರಿಟಿ ಇರುತ್ತಿದ್ದ ಕಟ್ಟಡಕ್ಕೆ ಡಿಕ್ಕಿಯಾಗಿ ನಿಂತಿದೆ. ನೂರು ಮೀಟರ್ ಉದ್ದಕ್ಕೆ ಇಳಿಜಾರಿನಲ್ಲಿ ಬಂದಿದ್ದು ವಾಹನಗಳು ಕಡಿಮೆ ಇದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ.
ಟೋಲ್ನಲ್ಲಿ ಕರ್ತವ್ಯದಲ್ಲಿದ್ದ ಸತೀಶ್ ನಾರ್ಲ ಪಡೀಲು, ಅಶೋಕ್ ಹಾಗೂ ಕೇರಳ ಕಡೆಗೆ ಸ್ಕೂಟರ್ನಲ್ಲಿ ತೆರಳುತ್ತಿದ್ದ ದಂಪತಿ ಲಾರಿಯು ಹಿಂದಕ್ಕೆ ಬರುವುದನ್ನು ನೋಡಿ ತಪ್ಪಿಸಿಕೊಂಡು ಸ್ವಲ್ಪದರಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಒಂದು ಲಕ್ಷದಷ್ಟು ನಷ್ಟ ಆಗಿದೆ. ರಂಜಾನ್ ತಿಂಗಳಾದ್ದರಿಂದ ಹೆಚ್ಚು ವಾಹನಗಳು ಇರಲಿಲ್ಲ. ವಾಹನಗಳು ಇರುತ್ತಿದ್ದರೆ ಅಪಾಯ ಆಗುತ್ತಿತ್ತು ಎಂದು ಟೋಲ್ ಸಿಬಂದಿ ಹೇಳಿದ್ದಾರೆ.




