ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ಆರು ಮಂದಿ ಮೃತ್ಯು, ಇಬ್ಬರು ಗಂಭೀರ
ಜೋದ್ಪುರ್: ಜೋದ್ಪುರ್-ಜೈಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿದ್ದು, ಇಬ್ಬರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಚುರು ಗ್ರಾಮದ ನಿವಾಸಿಗಳಾದ ವಿಜಯ್ ಸಿಂಗ್, ಉದಯ್ ಪ್ರತಾಪ್ ಸಿಂಗ್, ಮಂಜು ಕನ್ವರ್, ಪ್ರವೀಣ್ ಸಿಂಗ್, ದರ್ಪಣ್ ಸಿಂಗ್ ಮತ್ತು ಮಧು ಕೌವಾರ್ ಮೃತಪಟ್ಟವರು. ನಾಗಾಣ ಕುಲದೇವಿ ದರ್ಶನಕ್ಕೆ ಬುಲೇರೋ ವಾಹನದಲ್ಲಿ ಇವರೆಲ್ಲರೂ ಪ್ರಯಾಣಿಸುತ್ತಿದ್ದರು.
ಬಿಲಾರ ಬಳಿಯ ಜುರ್ಲಿಫಾಂಟಾ ಬಳಿ ರಾತ್ರಿ ಸುಮಾರು 1 ಗಂಟೆ ವೇಳೆಗೆ ಪಾರ್ಕ್ ಮಾಡಲಾಗಿದ್ದ ಟ್ರಕ್ ಹಿಂಭಾಗಕ್ಕೆ ಬೊಲೆರೋ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮೂವರು ಸ್ಥಳದಲ್ಲೇ ಅಸುನೀಗಿದರೆ, ಮೂವರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.
ಗಾಯಾಳುಗಳಿಬ್ಬರನ್ನು ಬಿಲಾರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.




