ಡಂಪ್ ಯಾರ್ಡ್ನಲ್ಲಿ ತ್ಯಾಜ್ಯ ಸಂಗ್ರಹಿಸುವಾಗ ಮಣ್ಣಿನ ಗುಡ್ಡ ಕುಸಿತ: ಇಬ್ಬರು ಮೃತ್ಯು
ಬಳ್ಳಾರಿ: ಸಂಡೂರು ತಾಲೂಕಿನ ಸುಲ್ತಾನ್ಪುರ ಗ್ರಾಮಕ್ಕೆ ಸಮೀಪದಲ್ಲರುವ ಜೆಎಸ್ಡಬ್ಲ್ಯು ಡಂಪ್ ಯಾರ್ಡ್ನಲ್ಲಿ ತ್ಯಾಜ್ಯ ಸಂಗ್ರಹಿಸುವಾಗ ಮಣ್ಣಿನ ಗುಡ್ಡೆ ಕುಸಿದು ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತರನ್ನು ರಾಜಾಪುರ ಗ್ರಾಮದ ನಿವಾಸಿ ಹೊನ್ನೂರಸ್ವಾಮಿ (18) ಹಾಗೂ ತುಮಟಿ ಗ್ರಾಮದ ನಿವಾಸಿ ರಾಮಾಂಜೆನೇಯ (50) ಎಂದು ತಿಳಿದುಬಂದಿದೆ.
ಜಿಂದಾಲ್ ಕಾರ್ಖಾನೆಯಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ಡಂಪಿಂಗ್ ಯಾರ್ಡ್ ನಲ್ಲಿ ಸಂಗ್ರಹಿಸಲಾಗುತ್ತಿದ್ದು, ಇದರಲ್ಲಿ ಕಬ್ಬಿಣದ ಚೂರುಗಳು ಇರುತ್ತವೆ. ಯಾರ್ಡ್’ಗೆ ಪ್ರವೇಶಿಸುವ ಕೆಲವರು ಆ ಕಬ್ಬಿಣದ ಚೂರುಗಳನ್ನು ಆಯ್ದುಕೊಂಡು ಹೊರಗೆ ಮಾರಾಟ ಮಾಡಿಕೊಳ್ಳುತ್ತಾರೆ.
ಇದು ಬಹಳ ವರ್ಷಗಳಿಂದರೂ ನಡೆದುಕೊಂಡು ಬಂದಿದ್ದು, ಕಬ್ಬಿಣದ ಬೆಲೆ ಹೆಚ್ಚಾಗಿದ್ದರಿಂದ ಆಯ್ದುಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದೆ. ಅಲ್ಲಿನ ಸೆಕ್ಯುರಿಟಿ ಗಾರ್ಡ್’ಗಳ ಕಣ್ತಪ್ಪಿಸಿ ಒಳ ಬಂದ ಕಾರ್ಮಿಕರು ಮಣ್ಣಿನ ಗುಡ್ಡ ಕುಸಿದ ಪರಿಣಾಮವಾಗಿ ಮೃತಪಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.




