ಶಿರಾ: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಲೆ ಮಾಡಿದ ಪತ್ನಿ
ತುಮಕೂರು: ತುಮಕೂರು ಜಿಲ್ಲೆ ಶಿರಾ ತಾಲೂಕಿನ ಕರೇಜವನಹಳ್ಳಿ ಗ್ರಾಮದಲ್ಲಿ ಯುವತಿಯೊಬ್ಬಳು ತನ್ನ ಪ್ರಿಯಕರನ ಜತೆ ಸೇರಿ ಗಂಡನನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ರಾಜು (34) ಎಂದು ಗುರುತಿಸಲಾಗಿದ್ದು, ರಾಕೇಶ್ (19) ಹಾಗೂ ಮೀನಾಕ್ಷಿ ( 25) ಬಂಧಿತ ಆರೋಪಿಗಳು.
ಮೀನಾಕ್ಷಿ ಎಂಬಾಕೆಯನ್ನು ರಾಜು ಕಳೆದ 8 ವರ್ಷಗಳ ಹಿಂದೆ ಮದುವೆಯಾಗಿದ್ದು, ಅವರಿಬ್ಬರಿಗೆ ಒಂದು ಹೆಣ್ಣು ಹಾಗೂ ಒಂದು ಗಂಡು ಮಗು ಇದೆ. ರಾಕೇಶ್ ಎಂಬಾತ ತುಮಕೂರಿನ ಖಾಸಗಿ ಕಾಲೇಜೊಂದರಲ್ಲಿ ಐಟಿಐ ಓದುತ್ತಿದ್ದು, ಕಳೆದ ಒಂದು ವರ್ಷದ ಹಿಂದೆ ಮದುವೆ ಕಾರ್ಯಕ್ರಮವೊಂದರಲ್ಲಿ ಮೀನಾಕ್ಷಿಗೆ ಪರಿಚಯವಾಗಿದ್ದ. ಈ ವೇಳೆ ಒಬ್ಬರಿಗೊಬ್ಬರು ಮೊಬೈಲ್ ನಂಬರ್ ಶೇರ್ ಮಾಡಿಕೊಂಡಿದ್ದರು.
ಇನ್ನು ಮೀನಾಕ್ಷಿ ಮನೆಯಲ್ಲಿ ಬಟ್ಟೆ ಹೊಲಿಯುತ್ತಿದ್ದು, ಬಟ್ಟೆ ಹೊಲಿಸುವ ನೆಪದಲ್ಲಿ ರಾಕೇಶ್ ಆಗಾಗ ಮೀನಾಕ್ಷಿ ಮನೆಗೆ ಎಂಟ್ರಿ ಕೊಡುತ್ತಿದ್ದ. ಈ ನಡುವೆ ಇವರಿಬ್ಬರ ಸ್ನೇಹ ಅನೈತಿಕ ಸಂಬಂಧಕ್ಕೆ ತಿರುಗಿದ್ದು, ಈ ವಿಷಯ ಗಂಡನಿಗೆ ತಿಳಿಯ ಬಾರದು ಎಂದು ಮೀನಾಕ್ಷಿ ಮತ್ತು ರಾಕೇಶ್ ಇಬ್ಬರು ಸೇರಿ ಗಂಡನ ಕೊಲೆಗೆ ಮುಹೂರ್ತ ಇಟ್ಟಿದ್ದಾರೆ.
ಕಳೆದ ಶುಕ್ರವಾರ ರಾತ್ರಿ ರಾಜು ಅವರ ಮನೆ ಬಳಿಯ ತೋಟದಲ್ಲಿ ರಾಕೇಶ್ ಹಾಗೂ ರಾಜು ಇಬ್ಬರು ಸೇರಿ ಎಣ್ಣೆ ಪಾರ್ಟಿ ಮಾಡಿ ಬಳಿಕ ರಾಜು ತಲೆ ಮೇಲೆ ಕಲ್ಲು ಎತ್ತಿಹಾಕಿ ರಾಕೇಶ್ ಕೊಲೆ ಮಾಡಿದ್ದಾನೆ.
ಇದಾದ ಬಳಿಕ ಕೊಲೆ ಪ್ರಕರಣವನ್ನು ಮುಚ್ಚಿಹಾಕಲು ರಾಜು ಬೈಕ್ನಲ್ಲಿದ್ದ ಪೆಟ್ರೋಲ್ ತೆಗೆದು, ರಾಜುಗೆ ಸುರಿದು ಬೆಂಕಿ ಹಚ್ಚಿ ಅಲ್ಲಿಂದ ಪರಾರಿ ಆಗಿದ್ದಾನೆ.




