ಸಚಿವ ಈಶ್ವರಪ್ಪಗೆ ಶಿಕ್ಷೆಯಾಗಬೇಕು: ಸಂತೋಷ್ ಪಾಟೀಲ್ ಪತ್ನಿ ಜಯಶ್ರೀ
ಬೆಳಗಾವಿ: ‘ಅನ್ಯಾಯ ಆಗಿದ್ದರಿಂದಲೇ ಪತಿ ಸಂತೋಷ್ ಪಾಟೀಲ ತೀರಿಕೊಂಡಿದ್ದಾರೆ. ಇದು ಕೊಲೆಯಲ್ಲದೆ ಮತ್ತೇನೂ ಅಲ್ಲ’ ಎಂದು ಪತ್ನಿ ಜಯಶ್ರೀ ಪಾಟೀಲ ಹೇಳಿದರು.
ಪತ್ರಕರ್ತರಿಗೆ ಪ್ರತಿಕ್ರಿಯಿಸಿದ ಅವರು, ‘ಕಾಮಗಾರಿ ಮಾಡಿಸಲು ಈಶ್ವರಪ್ಪ ಅವರೆ ಹೇಳಿದ್ದಾರೆ ಎಂದು ಪತಿ ತಿಳಿಸಿದ್ದರು. ಅವರು ಶೇ 40ರಷ್ಟು ಕಮಿಷನ್ ಕೇಳುತ್ತಿದ್ದಾರೆ ಎಂದೂ ಹೇಳಿದ್ದರು. ಹೀಗಾದರೆ ಸಾಲ ತೀರಿಸುವುದು ಹೇಗೆ ಎಂದು ಕೊರಗುತ್ತಿದ್ದರು. ನನ್ನ ಬಂಗಾರವನ್ನೂ ಒತ್ತೆ ಇಟ್ಟು ಕಾಮಗಾರಿ ಮಾಡಿಸಿದ್ದರು. ಹಣ ಬಾರದಿದ್ದರೆ ಏನು ಮಾಡುವುದು ಬಹಳ ನೊಂದಿದ್ದರು’ ಎಂದು ತಿಳಿಸಿದರು.
‘ಈಶ್ವರಪ್ಪ ಅವರು ಹಣ ಬಿಡುಗಡೆ ಮಾಡದೆ ಮೋಸ ಎಸಗಿದ್ದಾರೆ. ನಾನ್ಯಾರು ಎನ್ನುವುದು ಗೊತ್ತೇ ಇಲ್ಲ ಎಂದು ಹೇಳುತ್ತಿದ್ದಾರೆ ಎಂದು ಪತಿ ತಿಳಿಸಿದ್ದರು. ಪ್ರಕರಣದ ತನಿಖೆಯಷ್ಟೆ ಅಲ್ಲ, ಸಚಿವರಿಗೆ ಶಿಕ್ಷೆಯೂ ಆಗಬೇಕು’ ಎಂದು ಒತ್ತಾಯಿಸುತ್ತಾ ಕಣ್ಣೀರಿಟ್ಟರು.
ಅವರು ಸಂಜೆ ಇಲ್ಲಿನ ವಿಜಯನಗರದ ಮನೆಗೆ ಮಗು ಮತ್ತು ಪೋಷಕರೊಂದಿಗೆ ಬಂದರು. ಈ ವೇಳೆ ಬಂಧುಗಳ ಆಕ್ರಂದನ ಮುಗಿಲುಮುಟ್ಟಿತು.




