ತಿಮಿಂಗಲದ ವಾಂತಿ ಮಾರಾಟಕ್ಕೆ ಯತ್ನ: ಅಂಬರ್ಗ್ರಿಸ್ ಸಮೇತ ಮೂವರ ಬಂಧನ
ಸಾಗರ: ಬೆಲೆಬಾಳುವ ತಿಮಿಂಗಲ ವಾಂತಿ ಅಂಬರ್ಗ್ರಿಸ್ ಮಾರಾಟಕ್ಕಾಗಿ ಸಾಗಣೆಗೆ ಯತ್ನಿಸುತ್ತಿದ್ದ ಸಂದರ್ಭ ಇಲ್ಲಿನ ಮೂವರನ್ನು ನಗರ ಠಾಣೆ ಪೊಲೀಸರು ಭಾನುವಾರ ಮಾಲು ಸಮೇತ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಶಿವಮೊಗ್ಗ ಜಿಲ್ಲಾ ಪೊಲೀಸರ ಮಾರ್ಗದರ್ಶನದಲ್ಲಿ ಇಲ್ಲಿನ ಪೊಲೀಸರು ರೈಲ್ವೆ ನಿಲ್ದಾಣದ ಬಳಿ ನಡೆಸಿದ ಕಾರ್ಯಾಚರಣೆಯಲ್ಲಿ ತಿಮಿಂಗಿಲ ವಾಂತಿ ಅಕ್ರಮವಾಗಿ ಮಾರಾಟ ಮಾಡುವ ಜಾಲವನ್ನು ಬೇಧಿಸಿದ್ದಾರೆ.
ಸ್ಥಳೀಯರಾದ ಅಬ್ದುಲ್ ಯಾನೆ ರಾಮಪ್ಪ(40) ಸಂದೀಪ್ ಜಾನ್ (49)ಮತ್ತು ವಿ.ಜೆ.ರೋಹಿತ್ (42) ಬಂಧಿತ ಆರೋಪಿಗಳು. ಅಕ್ರಮದಲ್ಲಿ ಭಾಗಿಯಾದವರಿಂದ ಮಾಹಿತಿಯನ್ನು ಆಧರಿಸಿ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ತಿಮಿಂಗಲದ ಕರುಳಿನಲ್ಲಿ ಹುಟ್ಟುವ ಘನ ಮೇಣದಂತಹ ಅಂಬರ್ಗ್ರಿಸ್ನ್ನು ಸುಗಂಧ ದ್ರವ್ಯ ಹಾಗೂ ಮಾದಕ ವಸ್ತು ತಯಾರಿಕೆಗೆ ಬಳಸಲಾಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆಬಾಳುವ ವಸ್ತು ಇದಾಗಿದ್ದು. ಅರಣ್ಯ ಕಾಯಿದೆ ಅಡಿ ತಿಮಿಂಗಲ ವಾಂತಿ ಮಾರಾಟ ಅಪರಾಧವಾಗಿದೆ.




