ಧಾರವಾಡ: ಮುಸ್ಲಿಂ ಅಂಗಡಿಗಳ ಧ್ವಂಸಗೊಳಿಸಿದ ಪ್ರಕರಣ: ಒಟ್ಟು ನಾಲ್ವರು ಆರೋಪಿಗಳ ಆರೋಪಿಗಳ ಬಂಧನ
ಧಾರವಾಡ: ರಾಜ್ಯಾದ್ಯಂತ ವ್ಯಾಪಕ ಸುದ್ದಿಯಾಗಿದ್ದ ಧಾರವಾಡದ ನುಗ್ಗಿಕೇರಿ ದಾಂಧಲೆ ಘಟನೆಗೆ ಸಂಬಂಧಿಸಿ ಶ್ರೀರಾಮ ಸೇನೆಯ ನಾಲ್ವರನ್ನು ಬಂಧಿಸಲಾಗಿದೆ.
ದಾಂಧಲೆ ನಡೆಸಿದ್ದ ಆರೋಪಿಗಳಾದ ಮೈಲಾರಪ್ಪ ಗುಡ್ಡಪ್ಪನವರ್ (27), ಮಹಾನಿಂಗ ಐಗಳಿ(26), ಚಿದಾನಂದ ಕಲಾಲ (25) ಹಾಗೂ ಕುಮಾರ್ ಕಟ್ಟಿಮನಿ(26) ಎಂಬ ಆರೋಪಿಗಳನ್ನು ರವಿವಾರ ಬಂಧಿಸಲಾಗಿದೆ. ಪ್ರಕರಣದ ತನಿಖೆಯನ್ನು ಮುಂದುವರಿಸಿರುವುದಾಗಿ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಕಾಂತ್ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಧಾರವಾಡದ ನುಗ್ಗಿಕೇರಿ ಹನುಮಂತ ದೇವಸ್ಥಾನದ ಬಳಿ ವ್ಯಾಪಾರ ಮಾಡುತ್ತಿದ್ದ ನಾಲ್ಕು ಮುಸ್ಲಿಮರ ಅಂಗಡಿಗಳಿಗೆ ಶ್ರೀರಾಮ ಸೇನೆಯವರು ದಾಳಿ ಮಾಡಿ, ಅಂಗಡಿಯಲ್ಲಿದ್ದ ಹಣ್ಣುಗಳನ್ನು ನಾಶಪಡಿಸಿದ್ದರು. ಕಲ್ಲಂಗಡಿ ಹಣ್ಣನ್ನು ರಸ್ತೆಗೆ ಬಡಿದು ಹಾಳು ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ರಾಜ್ಯಾದ್ಯಂತ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು.





