ನುಗ್ಗಿಕೇರಿ ದೇವಸ್ಥಾನದ ಆವರಣದಲ್ಲಿ ಮುಸ್ಲಿಮ್ ವ್ಯಾಪಾರಿಯ ಮೇಲೆ ದಾಳಿ ಪ್ರಕರಣ: ಒಬ್ಬ ಆರೋಪಿಯ ಬಂಧನ
ಧಾರವಾಡ: ಇಲ್ಲಿನ ಪ್ರತಿಷ್ಠಿತ ನುಗ್ಗಿಕೇರಿ ದೇವಸ್ಥಾನದ ಆವರಣದಲ್ಲಿ ಮುಸ್ಲಿಮ್ ವ್ಯಾಪಾರಿಯ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆಯ ಕಾರ್ಯಕರ್ತನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಮಹಾಲಿಂಗ ಐಗಳಿ ಬಂಧಿತ ಆರೋಪಿಯಾಗಿದ್ದು, ನಬಿಸಾಬ್ ಅವರು ನೀಡಿರುವ ದೂರಿನನ್ವಯ ಧಾರವಾಡ ಗ್ರಾಮೀಣ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಧಾರವಾಡ ನುಗ್ಗಿಕೇರಿಯ ದೇವಸ್ಥಾನದ ಆವರಣದಲ್ಲಿ ಕಳೆದ 15 ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದ ನಬಿಸಾಬ್ ಅವರಿಗೆ ಸೇರಿದ ಅಂಗಡಿ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿದ್ದು, ಕ್ವಿಂಟಾಲ್ ಗಟ್ಟಲೆ ಕಲ್ಲಂಗಡಿ ಹಣ್ಣನ್ನು ಒಡೆದು ಹಾಕಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದ್ದು, ಘಟನೆಗೆ ರಾಜ್ಯಾದ್ಯಂತ ಖಂಡನೆ ವ್ಯಕ್ತವಾಗಿದೆ.




