ಸುಳ್ಯ: ಮನೆ ದರೋಡೆ ಪ್ರಕರಣ- ಆರು ಆರೋಪಿಗಳ ಬಂಧನ
ಸುಳ್ಯ: ರಾತ್ರಿ ವೇಳೆ ಮನೆಗೆ ನುಗ್ಗಿದ ದುಷ್ಕರ್ಮಿಗಳು ಆಭರಣಗಳನ್ನು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ.

ಕಾರ್ತಿಕ್, ಯಧುಕುಮಾರ್, ದೀಕ್ಷಿತ್ ಕೆ.ಎನ್, ನರಸಿಂಹನ್, ಸೆಂಥಿಲ್, ಪಾಂಡಿಸೆಲ್ವಂ ಬಂಧಿತ ಆರೋಪಿಗಳು.
ಘಟನೆಯ ವಿವರ:
ಮಾರ್ಚ್ 20 ರಂದು ದಕ್ಷಿಣ ಕನ್ನಡದ ಸುಳ್ಯ ಸಂಪಾಜೆಯಲ್ಲಿ ಅಂಬರೀಶ್ ಎಂಬವರ ಮನೆಗೆ ದರೋಡೆಕೋರರು ಒಳಪ್ರವೇಶಿಸಿ ಸುಮಾರು 83 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ದರೋಡೆ ಮಾಡಿಕೊಂಡು ಹೋಗಿದ್ದು ಈ ಸಂಬಂಧ ಆಶಾರವರು ಸುಳ್ಯ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆಸಿದ ಪೊಲೀಸ್ ಅಧೀಕ್ಷಕ ಸೋನಾವನೆ ಋಷಿಕೇಶ್ ಭಗವಾನ್ ಐಪಿಎಸ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ್ ಚಂದ್ರ ಅವರ ಸೂಚನೆಯಂತೆ ಪೊಲೀಸ್ ಉಪಾಧೀಕ್ಷಕಿ ಕು.ಗಾನಾ ಪಿ. ಕುಮಾರ್ ನವೀನ್ ಚಂದ್ರ ಜೋಗಿಯವರ ನೇತೃತ್ವದಲ್ಲಿ ಒಂದು ತಂಡವನ್ನು ರಚಿಸಿ ಆರೋಪಿಗಳ ಪತ್ತೆಗೆ ಕಾರ್ಯಾರಚರಣೆ ನಡೆಸಲಾಯಿತು.
ಕಾರ್ಯಾಚರಣೆಯಲ್ಲಿ ಯಶಸ್ವಿಯಾದ ಪೊಲೀಸರು ಕೊನೆಗೂ ಆರೋಪಿಗಳನ್ನು ಪತ್ತೆಹಚ್ಚಿ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಆರೋಪಿಗಳಿಗೆ ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ.
ನ್ಯಾಯಾಂಗ ಬಂಧನಲ್ಲಿದ್ದ ಆರೋಪಿ ಸಂಥಿಲ್ ಪೊಲೀಸ್ ಕಸ್ಟಡಿಗೆ ಪಡೆದು ತನಿಖೆ ಮುಂದುವರೆಸಿದಾಗ ಆರೋಪಿ ಮಾಹಿತಿಯಂತೆ ಒಟ್ಟು 71.52 ಗ್ರಾಂ ಚಿನ್ನಾಭರಣಗಳು 11,590 ರೂ ನಗದು, ಮತ್ತು ಕೃತ್ಯಕ್ಕೆ ಉಪಯೋಗಿಸಿದ ಎರಡು ವಾಹನಗಳನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.
ಪ್ರಕರಣದಲ್ಲಿ ತನಿಖೆ ಮುಂದುವರದಿದ್ದು ಉಳಿದ ಆರೋಪಿಗಳ ಪತ್ರಗೆ ಬಲೆಬೀಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.




