ಗುಂಡ್ಯ; ಅನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪಿಗಳ ನೆರವಿಗೆ ಬಂದಿಲ್ಲ ಎಂದು ಪುತ್ತೂರು ಶಾಸಕರಿದ್ದ ಬಸ್ ಗೆ ಮುತ್ತಿಗೆ!
ಉಪ್ಪಿನಂಗಡಿ; ಗುಂಡ್ಯ ಅನ್ಯ ಕೋಮಿನ ಜೋಡಿಯ ಮೇಲೆ ಹಲ್ಲೆ ಕೇಸ್ ಗೆ ಸಂಬಂಧಿಸಿ ಉಪ್ಪಿನಂಗಡಿ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಹಲ್ಲೆ ಸಂತ್ರಸ್ತ ನಝೀರ್ ನೀಡಿದ ದೂರಿನ ಹಿನ್ನಲೆಯಲ್ಲಿ ಉಪ್ಪಿನಂಗಡಿ ಠಾಣಾ ಪೊಲೀಸರು ಸುರೇಂದ್ರ, ತೀರ್ಥ ಪ್ರಸಾದ್, ಜಿತೇಶ್ ಎಂಬುವವರನ್ನು ಬಂಧನ ಮಾಡಿದ್ದಾರೆ. ಆದರೆ ಹಿಂದೂ ಸಂಘಟನೆಗಳು ತಮ್ಮ ಕಾರ್ಯಕರ್ತರನ್ನು ಬಂಧನ ಮಾಡಿರೋದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿವೆ.
ನಜೀರ್ ಸುಳ್ಳು ದೂರನ್ನು ನೀಡಿದ್ದಾನೆ ಎಂದು ಹಿಂದೂ ಕಾರ್ಯಕರ್ತರನ್ನು ಬಿಡಿಸುವಂತೆ ಪುತ್ತೂರು ಬಿಜೆಪಿ ಶಾಸಕ ಸಂಜೀವ ಮಠಂದೂರು ನೆರವನ್ನು ಯಾಚಿಸಿದ್ದಾರೆ. ಈ ವೇಳೆ ಮಠಂದೂರು, ತಾನು ಸ್ವಕ್ಷೇತ್ರದಲ್ಲಿ ಇದ್ದರೂ, ಊರಲ್ಲಿ ಇಲ್ಲ ಎಂದು ಹೇಳಿದ್ದಾರೆ ಎಂದು ಕಾರ್ಯಕರ್ತರು ದೂರಿದ್ದಾರೆ.
ಶಾಸಕ ಸಂಜೀವ ಮಠಂದೂರು ಮಂಗಳವಾರ ರಾತ್ರಿ ಪುತ್ತೂರಿನಿಂದ ಬೆಂಗಳೂರಿಗೆ ಬಸ್ ಮೂಲಕ ಪ್ರಯಾಣಿಸಿದ್ದು, ಇದನ್ನು ತಿಳಿದ ಕಾರ್ಯಕರ್ತರು ಉಪ್ಪಿನಂಗಡಿಯಲ್ಲಿ ಶಾಸಕರಿದ್ದ ಬಸ್ಗೆ ಮುತ್ತಿಗೆ ಹಾಕಿದ್ದಾರೆ.
ತನ್ನ ಸ್ವ ಕ್ಷೇತ್ರದಲ್ಲೇ ಕಾರ್ಯಕರ್ತರ ಬಂಧನವಾಗಿದೆ ಎಂದು ಶಾಸಕರ ವಿರುದ್ಧ ಕಾರ್ಯಕರ್ತರು ಧಿಕ್ಕಾರ ಕೂಗಿದ್ದಾರೆ. ತಾವು ಮಾಡಿದ ಅನೈತಿಕ ಪೊಲೀಸ್ ಗಿರಿಗೆ ಶಾಸಕರು ಬೆಂಬಲಿಸಿಲ್ಲ ಎಂದು ಕಿಡಿಕಾರಿದ್ದಾರೆ.




