ಉಡುಪಿ: ಕಾರು – ಸ್ಕೂಟರ್ ನಡುವೆ ಅಪಘಾತ: ಸ್ಕೂಟರ್ ಸವಾರ ಮೃತ್ಯು
ಉಡುಪಿ: ಕಾರೊಂದು ಸ್ಕೂಟರ್ ಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸಂಗೀತ ಕಲಾವಿದ, ಪರ್ಕಳದ ಹೃದಯಭಾಗದಲ್ಲಿರುವ ಮೆಡಿಕಲ್ ಶಾಪ್ ನ ಮಾಲೀಕ ಪರ್ಕಳ ವಾಮನ ನಾಯಕ್ ಅವರು ಮೃತಪಟ್ಟಿದ್ದಾರೆ.
ವಾಮನ ನಾಯಕ್ ಅವರು ಬೆಳಿಗ್ಗೆ 8 ಗಂಟೆಗೆ ಕೆಲಸಕ್ಕಾಗಿ ಮಗನನ್ನು ಉಡುಪಿಯಲ್ಲಿ ಬಿಟ್ಟು ಬೈಕ್ ನಲ್ಲಿ ಪರ್ಕಳದ ತಮ್ಮ ಮನೆಗೆ ವಾಪಾಸ್ಸಾಗುತ್ತಿದ್ದ ವೇಳೆ ವೇಗವಾಗಿ ಬಂದ ವಿದ್ಯಾರ್ಥಿನಿ ಅದಿತಿ ಉಡುಪ ಚಲಾಯಿಸುತ್ತಿದ್ದ ಕಾರು ಬೈಕ್ ಗೆ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ತಲೆಗೆ ಗಂಭೀರ ಗಾಯವಾಗಿದೆ. ತಕ್ಷಣ ಅವರನ್ನು ಉಡುಪಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ, ಓರ್ವ ಮಗ, ಮಗಳನ್ನು ಅಗಲಿದ್ದಾರೆ.
ಅಪಘಾತದ ಬಳಿಕ ಕಾರು ಚಲಾಯಿಸುತ್ತಿದ್ದ ವಿದ್ಯಾರ್ಥಿನಿ ಇಳಿದು ವಾಮನ ನಾಯಕ್ ಅವರು ಗಂಭೀರ ಗಾಯಗೊಂಡಿದ್ದನ್ನು ಕಂಡು ಕಾರಿನಲ್ಲಿ ಸ್ಥಳದಿಂದ ತೆರಳಿದ್ದಾಳೆ ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ. ಬಳಿಕ ಕಾರಿನ ನಂಬರ್ ಮೂಲಕ ಅಪಘಾತ ನಡೆಸಿದ ವಿದ್ಯಾರ್ಥಿನಿ ಹಾಗೂ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಉಡುಪಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




