ಸಚಿವರಾದ ಅಶ್ವತ್ಥ್ ನಾರಾಯಣ್, ಆರ್. ಅಶೋಕ್ ನಡುವೆ ವಿಧಾನಸಭೆಯಲ್ಲಿ ಜಟಾಪಟಿ
ಬೆಂಗಳೂರು: ತಹಶೀಲ್ದಾರ್ ವರ್ಗಾವಣೆ ವಿಚಾರಕ್ಕೆಸಂಬಂಧಪಟ್ಟಂತೆ ಸಚಿವರಾದ ಅಶ್ವತ್ಥ್ ನಾರಾಯಣ್ ಹಾಗೂ ಆರ್. ಅಶೋಕ್ ನಡುವೆ ವಿಧಾನಸಭೆ ಮೊಗಸಾಲೆಯಲ್ಲಿ ಜಟಾಪಟಿ ನಡೆದಿದೆ.
ಮಾಗಡಿ ಹಾಗೂ ರಾಮನಗರದ ತಹಶೀಲ್ದಾರ್ ಬದಲಾವಣೆಗಾಗಿ ಅಶ್ವತ್ಥನಾರಾಯಣ ಅವರು ಆರ್. ಅಶೋಕ ರಿಗೆ ಕೆಲ ದಿನಗಳ ಹಿಂದೆ ಮನವಿ ಸಲ್ಲಿಸಿದ್ದರು. ಆದರೆ ಕೆಲಸವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಶುಕ್ರವಾರ ಅಶ್ವತ್ಥನಾರಾಯಣ ಪ್ರಶ್ನಿಸಿದರು. ಇದರಿಂದ ಸಿಟ್ಟಿಗೆದ್ದ ಅಶೋಕ ನನ್ನ ಇಲಾಖೆ ವ್ಯಾಪ್ತಿಯಲ್ಲಿ ಮೂಗು ತೂರಿಸುವುದೇಕೆ? ಎಂದು ಪ್ರಶ್ನಿಸಿದಾಗ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಸ್ಥಳದಲ್ಲೇ ಇದ್ದ ಶಾಸಕರು ಮಧ್ಯಪ್ರವೇಶಿಸಿ ಜಗಳ ತಾರಕಕ್ಕೆ ಹೋಗದಂತೆ ತಡೆದಿದ್ದಾರೆ.
ಈ ಬಗ್ಗೆ ಅಶ್ವತ್ಥ್ ನಾರಾಯಣ್ ಪ್ರತಿಕ್ರಿಯೆ ನೀಡಿ, ಜಸ್ಟ್ ಮಾತುಕತೆ ನಡೆದಿದೆ. ಮಾಗಡಿ, ರಾಮನಗರದಲ್ಲಿ ತಹಶೀಲ್ದಾರ್ ಬದಲಾವಣೆ ಕೋರಿಕೆ ಬಂದಿದೆ. ಆ ಪ್ರಕಾರದಲ್ಲಿ ಕಂದಾಯ ಸಚಿವರು ಪರಿಗಣಿಸಿ ನೋಡುತ್ತೇನೆಂದು ಹೇಳಿದರು. ಕೆಲಸ ಮಾಡವುದು ಬಿಡುವುದು ಅವರ ಇಲಾಖೆಗೆ ಬಿಟ್ಟಿದ್ದು. ಬೇರೆ ಯಾವ ಚರ್ಚೆ, ವಿವಾದ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.




