ಅತ್ತಿಹಳ್ಳಿ ಅರಣ್ಯದ ಬಳಿ ಮೌಸ್ ಡೀರ್ ಬೇಟೆ: ಮೂವರು ಆರೋಪಿಗಳ ಬಂಧನ
ಹಾಸನ: ಸಕಲೇಶಪುರ ತಾಲೂಕಿನ ಅತ್ತಿಹಳ್ಳಿ ಅರಣ್ಯದ ಬಳಿ ಬುಧವಾರ ಅಳಿವಿನಂಚಿನಲ್ಲಿರುವ ಮೌಸ್ ಡೀರ್ ಬೇಟೆಯಾಡುತ್ತಿದ್ದ ಮೂವರನ್ನು ಯಸಳೂರು ವ್ಯಾಪ್ತಿಯ ಅರಣ್ಯಾಧಿಕಾರಿಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಬಂಧಿಸಿದ್ದಾರೆ.
ಮಾಂಸಕ್ಕಾಗಿ ಮೌಸ್ ಡೀರ್ ಬೇಟೆಯಾಡಿದ ಅತ್ತಿಹಳ್ಳಿಯ ಎಸ್.ಕೆ.ಧರ್ಮೇಗೌಡ, ಮಂಕನಹಳ್ಳಿಯ ಎ.ಎಸ್.ಸುಬ್ರಹ್ಮಣ್ಯ ಮತ್ತು ಸಕಲೇಶಪುರ ತಾಲೂಕಿನ ಬೆಟ್ಟದಮನೆಯ ಬಿ.ಆರ್.ಸುರೇಶ್ ಎಂಬುವವರನ್ನು ಅರಣ್ಯ ಉಪ ಸಂರಕ್ಷಣಾಧಿಕಾರಿ ಕೆ.ಎನ್.ಬಸವರಾಜ್ ಮತ್ತು ವ್ಯಾಪ್ತಿಯ ಅರಣ್ಯಾಧಿಕಾರಿ ನರಸಿಂಹಮೂರ್ತಿ ನೇತೃತ್ವದ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ಪ್ರಮುಖ ಆರೋಪಿ ಧರ್ಮೇಗೌಡ ಎಂಬುವರಿಗೆ ಸೇರಿದ ದನದ ಕೊಟ್ಟಿಗೆಯಲ್ಲಿದ್ದ 9.5 ಕೆಜಿ ಮಾಂಸ, ಸತ್ತ ಪ್ರಾಣಿಯ ಚರ್ಮ ಮತ್ತು ಬೇಟೆಗೆ ಬಳಸಿದ್ದ ಆಯುಧವನ್ನು ಅರಣ್ಯಾಧಿಕಾರಿಗಳು ಜಪ್ತಿ ಮಾಡಿದ್ದಾರೆ. ಮೂವರನ್ನು ಸಕಲೇಶಪುರದ ಹಿರಿಯ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಆರು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.




