ಕೆಂಪುಕೋಟೆಯಲ್ಲಿ ಭಗವಾಧ್ವಜ ಹಾರಿಸುತ್ತೇವೆ ಎಂಬ ದೇಶದ್ರೋಹಿ ಹೇಳಿಕೆ ನೀಡಿದ ಶಾಸಕ ಹರೀಶ್ ಪೂಂಜಾನ ಮೇಲೆ ಪ್ರಕರಣ ದಾಖಲಿಸಿ : ಸಿಪಿಐ(ಎಂ) ಆಗ್ರಹ
ಬೆಳ್ತಂಗಡಿ: ದೆಹಲಿಯ ಕೆಂಪುಕೋಟೆಯಲ್ಲಿ ಭಗವಾಧ್ವಜ ಹಾರಿಸುತ್ತೇವೆ ಎಂಬ ದೇಶದ್ರೋಹಿ ಹೇಳಿಕೆ ನೀಡಿದ್ದ ಶಾಸಕ ಹರೀಶ್ ಪೂಂಜಾ ಹೇಳಿಕೆ ಅತ್ಯಂತ ಖಂಡನೀಯ. ದೇಶದ್ರೋಹಿ ಶಾಸಕನ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಸಮಿತಿ ಆಗ್ರಹಿಸಿದೆ.
ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸದೆ ಬ್ರಿಟಿಷರ ಗುಲಾಮರಾಗಿದ್ದ ಬಿಜೆಪಿ,RSS ಕಾರ್ಯಕರ್ತರಿಗೆ ರಾಷ್ಟ್ರಧ್ವಜದ ಮಹತ್ವ ಗೊತ್ತಿಲ್ಲ. ದೇಶದ ಸಂಕೇತವಾಗಿರುವ ರಾಷ್ಟ್ರಧ್ವಜವನ್ನು ಬಹಿರಂಗವಾಗಿ ಅವಮಾನಿಸಿ , ದೆಹಲಿಯ ಕೆಂಪುಕೋಟೆಯಲ್ಲಿ ಭಗವಾಧ್ವಜ ಹಾರಿಸುತ್ತೇವೆ ಎಂದು ಉದ್ರೇಕಕಾರಿಯಾಗಿ ಭಾಷಣ ಮಾಡಿದ್ದು , ಶಾಸಕ ಪೂಂಜಾನ ಮಾನಸಿಕ ಆರೋಗ್ಯದ ಸಮಸ್ಯೆಯ ಸಂಕೇತ ಎಂದು ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಸಮಿತಿ ಅಭಿಪ್ರಾಯ ಪಟ್ಟಿದೆ. ಬೆಳ್ತಂಗಡಿ ಪೋಲಿಸರ ಎದುರಿನಲ್ಲಿಯೇ ದೇಶದ್ರೋಹಿ ಹೇಳಿಕೆ ನೀಡಿದ ಶಾಸಕ ಹರೀಶ್ ಪೂಂಜಾ ನ ವಿರುದ್ಧ ಇನ್ನೂ ಕೇಸ್ ದಾಖಲಿಸದಿರುವುದು ದುರಂತ.
ಪೋಲಿಸ್ ಇಲಾಖೆ ದೇಶದ್ರೋಹಿಗಳನ್ನು ರಕ್ಷಿಸುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ. ತಕ್ಷಣ ದೇಶದ್ರೋಹಿ ಶಾಸಕ ಹರೀಶ್ ಪೂಂಜಾ ನ ವಿರುದ್ಧ ದೇಶದ್ರೋಹದ ಆರೋಪದಡಿ ಕೇಸ್ ದಾಖಲಸ ಬೇಕು. ಇಲ್ಲದಿದ್ದರೆ ದೇಶಪ್ರೇಮಿ ಸಂಘಟನೆಗಳ ಜೊತೆಗೆ ಬೀದಿಗಿಳಿಯಬೇಕಾಗುತ್ತದೆ ಎಂದು ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಶಿವಕುಮಾರ್ ಎಸ್. ಎಂ , ವಸಂತ ನಡ , ಸುಕನ್ಯಾ ಹರಿದಾಸ್ , ಶೇಖರ್ ಲಾಯಿಲ ಎಚ್ಚರಿಕೆ ನೀಡಿದ್ದಾರೆ




