ಶಿವಮೊಗ್ಗ: ಹಿಂದೂ ಕಾರ್ಯಕರ್ತನ ಬರ್ಬರ ಹತ್ಯೆ: 2 ಉದ್ರಿಕ್ತ ಗುಂಪುಗಳ ಮಧ್ಯೆ ಕಲ್ಲು ತೂರಾಟ
ಶಿವಮೊಗ್ಗ: ನಗರದ ಕಾಮತ್ ಪೆಟ್ರೋಲ್ ಬಂಕ್ ಬಳಿ ಸಪ್ತಗಿರಿ ಬಾರ್ ಬಳಿಯಲ್ಲಿ ಹಿಂದೂ ಕಾರ್ಯಕರ್ತನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.
ಸಿಗೇಹಟ್ಟಿ ಬಡಾವಣೆ ನಿವಾಸಿ ಹರ್ಷ (26) ಹತ್ಯೆಯಾಗಿರುವ ಯುವಕ.
ಐದು ವರ್ಷಗಳಿಂದ ಭಜರಂಗದಳದ ಸಕ್ರಿಯ ಕಾರ್ಯಕರ್ತನಾಗಿದ್ದ. ಶಿವಮೊಗ್ಗದ ತೀರ್ಥಹಳ್ಳಿಗೆ ಹೋಗುವ ರಸ್ತೆ ಪಕ್ಕದ ಬಡಾವಣೆಯಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಕಾರಿನಲ್ಲಿ ಬಂದಿದ್ದ 4ರಿಂದ 6 ಜನರ ಗುಂಪು, ಬಜರಂಗದಳ ಕಾರ್ಯಕರ್ತ ಹರ್ಷ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಹರ್ಷ ರಸ್ತೆಯಲ್ಲೇ ಬಿದ್ದು ಒದ್ದಾಡುತ್ತಿದ್ದ. ಕೂಡ್ಲೇ ಯುವಕನನ್ನು ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದ್ರೂ ಚಿಕಿತ್ಸೆ ಫಲಿಸದೇ ಹರ್ಷ ಜೀವಬಿಟ್ಟಿದ್ದಾನೆ.
ಯುವಕ ಹರ್ಷನ ಮೇಲೆ ಈ ಹಿಂದೆ ಎರಡು ಬಾರಿ ಈತನ ಮೇಲೆ ಅಟ್ಯಾಕ್ ನಡೆದಿತ್ತು. ಆದರೆ ನಿನ್ನೆ ಸ್ಕೆಚ್ ಹಾಕಿದ್ದ ದುಷ್ಕರ್ಮಿಗಳು, ಹರ್ಷನ ಮೇಲೆ ಡೆಡ್ಲಿ ದಾಳಿ ಮಾಡಿದ್ದಾರೆ. ನೋಡ ನೋಡ್ತಿದ್ದಂತೆ ಮಾರಕಾಸ್ತ್ರ ಬೀಸಿ ಎಸ್ಕೇಪ್ ಆಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸೀಗೆಹಟ್ಟಿ ಬಡಾವಣೆ ಮತ್ತು ಅಕ್ಕಪಕ್ಕದ ಬಡಾವಣೆ ನಿವಾಸಿಗಳು ಜಮಾಯಿಸಿದರು. ರವಿವರ್ಮ ಬೀದಿ, ಕಲರ್ ಪೇಟೆ, ಶಾಮರಾವ್ ಬೀದಿ ಸೀಗೆಹಟ್ಟಿ ಸೇರಿ ವಿವಿಧ ಬಡಾವಣೆಯಲ್ಲಿ 2 ಉದ್ರಿಕ್ತ ಗುಂಪುಗಳ ಮಧ್ಯೆ ಕಲ್ಲು ತೂರಾಟ ನಡೆಯಿತು. ಇದರಿಂದಾಗಿ ಪೊಲೀಸರು ಲಾಠಿಚಾರ್ಜ್ ಮಾಡಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.




