ಉಡುಪಿ: ಜೀವಂತ ಮಹಿಳೆಯನ್ನು ಸೂಟ್ ಕೇಸ್ನಲ್ಲಿ ತುಂಬಿ ಕಿಡ್ನಾಪ್ಗೈದು ಕೊಲೆ ಯತ್ನ
ಮಣಿಪಾಲ: ಮನೆಯಲ್ಲಿದ್ದ ಒಂಟಿ ಮಹಿಳೆಯನ್ನು ಜೀವಂತವಾಗಿ ಸೂಟ್ ಕೇಸ್ನಲ್ಲಿ ತುಂಬಿಸಿ ಕಿಡ್ನಾಪ್ ಮಾಡಿ ಕೊಲೆಗೆ ಯತ್ನಿಸಿದ ಭಯಾನಕ ಘಟನೆ ಉಡುಪಿಯ ಜಿಲ್ಲೆಯ ಮಣಿಪಾಲ ಠಾಣಾ ವ್ಯಾಪ್ತಿಯ ಮಂಚಿಕುಮೇರಿ ಬಳಿ ನಡೆದಿದೆ.
ಬಂದಿತರನ್ನು ಮಿಥುನ್ ಹಾಗೂ ಆತನ ಸ್ನೇಹಿತ ನಾಗೇಶ್ ಎಂದು ತಿಳಿದು ಬಂದಿದೆ. ಇದರಲ್ಲಿ ಮಿಥುನ್ ಸುಮತಿಯವರ ಅಕ್ಕನ ಮಗ ಎಂದು ತಿಳಿದು ಬಂದಿದೆ.
ಘಟನೆ ಹಿನ್ನೆಲೆ
ನಿನ್ನೆ ಸಂಜೆ ಇಬ್ಬರು ವ್ಯಕ್ತಿಗಳು ಕೈಯಲ್ಲಿ ದೊಡ್ಡ ಟ್ರಾಲಿ ಬ್ಯಾಗನ್ನು ಹಿಡಿದುಕೊಂಡು ರಮಾನಾಥ್ ರೈ ರವರ ಮನೆಯ ಕಡೆಗೆ ಹೋಗುತ್ತಿದ್ದರು. ಇದನ್ನು ಸ್ಥಳೀಯರಾದ ಸುದರ್ಶನ್ ಎಂಬುವವರು ನೋಡಿದ್ದರು.
ಸ್ವಲ್ಪ ಹೊತ್ತಿನ ಬಳಿಕ ಎಂದಿನಂತೆ ತನ್ನ ಆಟೋ ನಿಲ್ಲಿಸಿ ಮನೆಯೊಳಗೆ ಹೋಗಲು ಮನೆಯ ಬಾಗಿಲು ಬಡಿದರೂ ಅವರ ಹೆಂಡತಿ ಸುಮತಿ ಬಾಗಿಲು ತೆಗೆಯಲಿಲ್ಲ. ಇದೇ ವೇಳೆ ಮನೆಯೊಳಗಿನಿಂದ ಸಣ್ಣದಾದ ಗಲಾಟೆಯಾದ ಶಬ್ದ ಕೇಳಿಬರುತ್ತಿತ್ತು. ಇದರಿಂದ ಗಾಬರಿಗೊಂಡ ರಮಾನಾಥ್ ರೈ ಸ್ಥಳೀಯರನ್ನು ಕರೆದಿದ್ದಾರೆ.
ಆಗ ಹತ್ತಿರದಲ್ಲೇ ಮಹಮ್ಮದ್ ಇಸ್ಮಾಯಿಲ್, ಸದಾನಂದ್, ಹರೀಶ್, ಮೇಘಳಾ ಅಲ್ಲಿ ಬಂದು ಮತ್ತೆ ಬಾಗಿಲು ಬಡಿದಿದ್ದಾರೆ. ಈ ವೇಳೆ ಏಕಾಏಕಿ ಮನೆಯೊಳಗಿನಿಂದ ಇಬ್ಬರು ಬಾಗಿಲು ತೆರೆದು ಹೊರಗೆ ಬಂದು ಓಡಲು ಯತ್ನಿಸಿದ್ದಾರೆ.
ಇತ್ತ ಒಳಗೆ ಹೋಗಿ ನೋಡಿದಾಗ ಸುಮತಿಯನ್ನು ಬಿಳಿ ಪ್ಲಾಸ್ಟಿಕ್ ಚೀಲದಲ್ಲಿ ತುರುಕಿ ಆಕೆಯನ್ನು ಅವರು ತಂದಿದ್ದ ದೊಡ್ಡ ಟ್ರಾಲಿ ಬ್ಯಾಗ್ ಒಳಗೆ ತುಂಬಿಸಿಟ್ಟಿದ್ದರು.
ಸುಮತಿ ಅರೆಪ್ರಜ್ಞಾವಸ್ಥೆಯಲ್ಲಿದ್ದರು. ತಕ್ಷನವೇ ಆಕೆಯನ್ನು ಹೊರಗಹೆ ತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ.
ಇತ್ತ ಮನೆಯೊಳಗಿನಿಂದ ಓಡಿ ಬಂದ ಇಬ್ಬರನ್ನು ಮನೆಯ ಹೊರಗಿದ್ದ ಇತರೆ ಸ್ಥಳೀಯರು ಹಿಡಿದಿದ್ದಾರೆ.
ಯಾವುದೋ ಹಳೆಯ ದ್ವೇಷದಿಂದ ಸುಮತಿರವರನ್ನು ಕೊಲೆ ಮಾಡಿ ಸಾಗಾಟ ಮಾಡುವ ಉದ್ದೇಶದಿಂದಲೇ ಉಸಿರುಗಟ್ಟಿಸಿ ಚೀಲದಲ್ಲಿ ತುಂಬಿ ಟ್ರಾಲಿಯಲ್ಲಿ ಹಾಕಿ ಸಾಗಿಸಲು ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣಾ ಕೊಲೆಯತ್ನ ಪ್ರಕರಣ ದಾಖಲಾಗಿದೆ




