ಬಯಸಿದ್ದನ್ನು ಧರಿಸುವ ಹಕ್ಕು ಎಲ್ಲರಿಗೂ ಇದೆ: ಬಿಹಾರ ಸಿಎಂ ನಿತೀಶ್ ಕುಮಾರ್
ಪಟ್ನಾ: ‘ಪ್ರತಿ ಧರ್ಮವನ್ನು ಮತ್ತು ಅವರ ಆರಾಧನೆಯ ಆಚರಣೆಗಳನ್ನು ಗೌರವಿಸುತ್ತೇನೆ’ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸೋಮವಾರ ಹೇಳಿದ್ದಾರೆ.
ಬಿಹಾರದಲ್ಲಿ ಬಿಜೆಪಿ ಮೈತ್ರಿಯೊಂದಿಗೆ ಸರ್ಕಾರ ರಚಿಸಿರುವ ಜೆಡಿಯು ವರಿಷ್ಠ, ಮುಖ್ಯಮಂತ್ರಿ ನಿತೀಶ್ ಅವರ ಈ ಹೇಳಿಕೆಯು ಕರ್ನಾಟಕದ ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಪ್ರಾಮುಖ್ಯತೆ ಪಡೆದಿದೆ.
‘ಯಾರಾದರೂ ತಲೆಯನ್ನು ಬಟ್ಟೆಯಿಂದ ಮುಚ್ಚಿಕೊಂಡರೆ, ಹಣೆಯ ಮೇಲೆ ಶ್ರೀಗಂಧದ ಬೊಟ್ಟು ಇಟ್ಟುಕೊಂಡರೆ ಅದು ವಿವಾದಾತ್ಮಕ ವಿಷಯವಾಗುವುದಿಲ್ಲ ಎಂದು ನಾನು ನಂಬುತ್ತೇನೆ. ಪ್ರತಿಯೊಬ್ಬ ವ್ಯಕ್ತಿಗೂ ಅವರು ಬಯಸಿದ್ದನ್ನು ಧರಿಸುವ ಹಕ್ಕಿದೆ. ಈ ವಿಷಯದಲ್ಲಿ ನಮ್ಮದೇನೂ ಆಕ್ಷೇಪಗಳಿಲ್ಲ. ಅಂತಹ ಯಾವ ವಿವಾದಗಳೂ ಬಿಹಾರದಲ್ಲಿಲ್ಲ’ ಎಂದು ನಿತೀಶ್ ಹೇಳಿದ್ದಾರೆ.




