ಮನೆಯವರನ್ನು ಕಟ್ಟಿ ಹಾಕಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ಕಳವು
ಸಂಕೇಶ್ವರ: ನಗರದ ಹೊರ ವಲಯದ ತೋಟದ ಮನೆಗೆ ಸಿನಿಮೀಯ ರೀತಿ ನುಗ್ಗಿದ ಸುಮಾರು 8 ಜನರ ಖದೀಮರ ತಂಡವು ಮನೆಯವರನ್ನು ಕಟ್ಟಿ ಹಾಕಿ, ಕತ್ತಿಗೆ ಚಾಕು ಇಟ್ಟು ಮನೆಯಲ್ಲಿನ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣ ದೋಚಿ ಪರಾರಿಯಾಗಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.
ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ಸುಮಾರು 8ರಿಂದ 10 ಕಳ್ಳರು ನಗರದ ಹೊರ ವಲಯದ ತೋಟದ ಮನೆಯಲ್ಲಿರುವ ರಾಮ ಕಿಲ್ಲೇದಾರ ಮನೆಯ ಬೀಗ ಮುರಿದು ಸುಮಾರು 30 ಗ್ರಾಂ ಚಿನ್ನಾಭರಣ ಹಾಗೂ ಅವರ ಸಂಬಂಧಿಕರ ಮನೆಗೆ ನುಗ್ಗಿ ಮನೆಯಲ್ಲಿದ್ದ ಮೂವರ ಕೈಕಾಲು ಕಟ್ಟಿ ಹಾಕಿ ಓರ್ವನ ಕತ್ತಿಗೆ ಚಾಕು ಹಿಡಿದು ಮನೆಯಲ್ಲಿದ್ದ ಸುಮಾರು 5.5 ಲಕ್ಷ ಮೌಲ್ಯದ 110 ಗ್ರಾಂ ಚಿನ್ನಾಭರಣ ಮತ್ತು 75 ಸಾವಿರ ನಗದು ಹೀಗೆ ಒಟ್ಟು ಎರಡು ಮನೆಗಳಲ್ಲಿನ 140 ಗ್ರಾಂ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದಾರೆ.




