ಮಂಗಳೂರು: ಸಂತ ಅಲೋಶಿಯಸ್ ಕಾಲೇಜಿನಲ್ಲಿ ʼಹಿಜಾಬ್- ಕೇಸರಿʼ ವಿವಾದವಿಲ್ಲ; ಪೊಲೀಸ್ ಆಯುಕ್ತರ ಸ್ಪಷ್ಟನೆ
ಮಂಗಳೂರು: ಹಿಜಾಬ್- ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿ ವೈರಲ್ ಆಗುತ್ತಿರುವ ವೀಡಿಯೊ ಬಗ್ಗೆ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸ್ಪಷ್ಟನೆ ನೀಡಿದ್ದಾರೆ.
“ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ತಂಡಗಳೆರಡು ಪರಸ್ಪರ ಘೋಷಣೆ ಕೂಗುತ್ತಿರುವ ದೃಶ್ಯ ಎಂಬುದಾಗಿ ಪ್ರಸಾರವಾಗುತ್ತಿರುವ ವೀಡಿಯೊ ಸುದ್ದಿ ಸುಳ್ಳು. ಹಿಜಾಬ್- ಕೇಸರಿ ಶಾಲು ವಿವಾದದ ಬೇರೆ ಕಡೆ ನಡೆದ ಹಳೆ ವೀಡಿಯೊಗಳನ್ನು ಸರ್ಕ್ಯೂಲೇಟ್ ಮಾಡಿಕೊಂಡು ಮಂಗಳೂರಿನ ಸಂತ ಅಲೋಶಿಯಸ್ ಮತ್ತು ಬೇರೆ ಬೇರೆ ಕಾಲೇಜುಗಳಲ್ಲಿ ನಡೆದ ಘಟನೆ ಎಂದು ಹೆಸರಿಸಿಕೊಂಡು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ.
ನಗರದಲ್ಲಿ ಎಲ್ಲವೂ ಶಾಂತಿಯುತವಾಗಿದ್ದು, ಹೈಕೋರ್ಟ್ ಆದೇಶದ ಅನುಸಾರ ಎಲ್ಲರೂ ಸಹಕರಿಸುತ್ತಿದ್ದಾರೆ. ಈ ವದಂತಿಗೆ ಯಾರೂ ಕಿವಿಗೊಡಬಾರದು” ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.




