ಕ್ರಿಕೆಟ್ ಬಾಲ್ ಗೆ ಹಣ ನೀಡದ ಕಾರಣಕ್ಕಾಗಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿ: 15 ಜನರ ವಿರುದ್ಧ ಪ್ರಕರಣ ದಾಖಲು
ಅಫಜಲಪುರ: ಕ್ರಿಕೆಟ್ ಪಂದ್ಯಾವಳಿ ಸಂದರ್ಭದಲ್ಲಿ ಬಾಲ್ ತರಲು ಹಣ ನೀಡದ ಕಾರಣಕ್ಕಾಗಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದ ಘಟನೆ ತಾಲೂಕಿನ ಗೊಬ್ಬುರ ಬಿ ಗ್ರಾಮದಲ್ಲಿ ನಡೆದಿದೆ.
ಮಾರಾಮಾರಿ ಘಟನೆಯಲ್ಲಿ ಸುಮಾರು ಜನರಿಗೆ ಗಾಯಗಳಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಜನರ ಮೇಲೆ ದೇವಲಗಾಣಗಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಗೊಬ್ಬೂರ (ಬಿ) ಗ್ರಾಮದ ಹೊರವಲಯದಲ್ಲಿ ಫೆಬ್ರುವರಿ 8ರಂದು ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.
ಮರುದಿನ ಫೆಬ್ರುವರಿ 9ರಂದು ಕ್ರಿಕೆಟ್ ಆಡಲು ಬಾಲ್ಗೆ ದುಡ್ಡು ನೀಡದ ಕಾರಣಕ್ಕಾಗಿ ಎರಡು ಗುಂಪುಗಳ ಮಧ್ಯೆ ಕಲಬುರಗಿ ಹಾಗೂ ಅಫಜಲಪುರ ರಾಜ್ಯ ಹೆದ್ದಾರಿ ಮೇಲೆ ಕೈಯಲ್ಲಿ ಕೋಲು, ಬಡಿಗೆ ಹಿಡಿದು ಪರಸ್ಪರ ಬಡಿದಾಡಿದ್ದರು.
ಇದರಲ್ಲಿ ಮೂವರಿಗೆ ಗಂಭೀರ ಗಾಯವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ದೇವಲಗಾಣಗಾಪುರ ಪೋಲಿಸ್ ಠಾಣೆಯಲ್ಲಿ 15 ಜನರ ಮೇಲೆ ಪ್ರಕರಣ ದಾಖಲಾಗಿದೆ ಎಂದು ಪಿಎಸ್ಐ ರಾಜಶೇಖರ ರಾಠೊಡ ತಿಳಿಸಿದ್ದಾರೆ.




