ಸುಳ್ಯದ ವ್ಯಕ್ತಿ ಬೆಳ್ತಂಗಡಿಯಲ್ಲಿ ನಡೆದ ವಾಹನ ಅಪಘಾತದಲ್ಲಿ ಮೃತ್ಯು
ಬೆಳ್ತಂಗಡಿ: ತಾಲೂಕಿನ ನಾರಾವಿ ಗ್ರಾಮದ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ಲಾರೆನ್ಸ್ ಎಂಬುವವರು ಮೃತರಾದ ಘಟನೆ ಫೆ.4ರಂದು ವರದಿಯಾಗಿದೆ.
ಮೃತ ವ್ಯಕ್ತಿ ಸುಳ್ಯ ತಾಲೂಕಿನ ಚೆಂಬು ಗ್ರಾಮದವರಾಗಿದ್ದು, ಅವರು ಬೆಳ್ತಂಗಡಿ ತಾಲೂಕು ನಾರಾವಿಯಲ್ಲಿ ರಬ್ಬರ್ ತೋಟ ಲೀಸಿಗೆ ಪಡೆದುಕೊಂಡು ಕೆಲಸ ನಿರ್ವಹಿಸುತ್ತಿದ್ದರು.
ಫೆಬ್ರವರಿ 4 ರಂದು ಬೆಳಿಗ್ಗೆ ರಬ್ಬರ್ ಹಾಲು ತೆಗೆಯಲು ತೋಟಕ್ಕೆ ತಮ್ಮ ಬೈಕಿನಲ್ಲಿ ತಮ್ಮ ಸಹಚರನೊಂದಿಗೆ ಹೋಗುತ್ತಿದ್ದ ಸಂದರ್ಭ ಅದೇ ರಸ್ತೆಯಲ್ಲಿ ಬರುತ್ತಿದ್ದ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ವಾಹನ ನಿಲ್ಲಿಸದೆ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಘಟನೆಯಿಂದ ಬೈಕಿನ ಹಿಂಭಾಗದಲ್ಲಿ ಕುಳಿತಿದ್ದ ಸವಾರ ಅಲ್ಪ ಸ್ವಲ್ಪ ಗಾಯಗಳಿಂದ ಪಾರಾಗಿದ್ದು, ಲಾರೆನ್ಸ್ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.




