ಉಪ್ಪಿನಂಗಡಿ: ಹಿಂದೂ ಕಾರ್ಯಕರ್ತರ ಮೇಲೆ ತಲವಾರು ದಾಳಿ ಪ್ರಕರಣ:
ಇಬ್ಬರು ಎಸ್.ಡಿ.ಪಿ.ಐ ಮುಖಂಡರಿಗೆ ಜಾಮೀನು
ಉಪ್ಪಿನಂಗಡಿ: ಉಪ್ಪಿನಂಗಡಿಯಲ್ಲಿ ನಡೆದಿದ್ದ ಹಿಂದೂ ಮುಖಂಡನ ಕೊಲೆ ಯತ್ನ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಇಬ್ಬರು ಎಸ್ ಡಿ ಪಿ ಐ ಮುಖಂಡರಿಗೆ ಜಾಮೀನು ಮಂಜೂರಾಗಿದೆ.
ದಿನಾಂಕ 6/12/2021 ರಂದು ಸಂಜೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಸುಬ್ರಹ್ಮಣ್ಯ ಕ್ರಾಸ್ ಎಂಬಲ್ಲಿ ಅಶೋಕ್ ಶೆಟ್ಟಿ ಎಂಬವರ ಮಾಲಕತ್ವದ ಹಸಿ ಮೀನು ಮಾರುಕಟ್ಟೆಗೆ ದಾಳಿ ಮಾಡಿದ ಸುಮಾರು ಐದರಿಂದ ಆರು ವ್ಯಕ್ತಿಗಳು ಅಲ್ಲಿ ಇರುವಂತಹ ಅಶೋಕ್ ಶೆಟ್ಟಿ ಮೋಹನ್ ದಾಸ್ ಶೆಟ್ಟಿ ಮತ್ತು ಮಹೇಶ್ ಎಂಬ ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ಯದ್ವಾತದ್ವಾ ತಲವಾರು ದಾಳಿ ಮಾಡಿ ಕೊಲೆ ಯತ್ನ ಮಾಡಿರುತ್ತಾರೆ ಈ ಕುರಿತು ಪ್ರಕರಣ ದಾಖಲಾಗಿತ್ತು.
ಉಪ್ಪಿನಂಗಡಿ ಪೊಲೀಸರು ತನಿಖೆ ನಡೆಸಿ ಈ ಪ್ರಕರಣದಲ್ಲಿ ಎಸ್.ಡಿ.ಪಿ.ಐ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರು ಇದ್ದಾರೆ ಎಂದು ಸಂಶಯ ವ್ಯಕ್ತಪಡಿಸಿ ಸಂಘಟನೆಯ ಸ್ಥಳೀಯ ನಾಯಕರಾದ ಝಕರಿಯ ಕೊಡಿಪ್ಪಾಡಿ ಮತ್ತು ಎಸ್ ಡಿ ಪಿ ಐ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಮುಸ್ತಫ ಕಡವಿನ ಬಾಗಿಲು ಎಂಬವರನ್ನು ವಿಚಾರಣೆಗೆ ಒಳಪಡಿಸಿ ಈ ಪ್ರಕರಣದ ಸಂಚು ರೂಪಿಸಿದ್ದಾರೆ ಎಂದು ಅವರನ್ನು ಬಂಧಿಸಿದ್ದರು.
ಆ ನಂತರದ ಬೆಳವಣಿಗೆಯಲ್ಲಿ ಪೊಲೀಸ್ ಠಾಣೆಯ ಎದುರು ಭಾಗದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಎಸ್ ಡಿ ಪಿ ಐ ಕಾರ್ಯಕರ್ತರು ಪ್ರತಿಭಟನೆಯನ್ನು ಮಾಡಿ ತನ್ನ ನಾಯಕರ ಅಕ್ರಮ ಬಂಧನದ ಕುರಿತು ಅಸಹನೆಯನ್ನು ವ್ಯಕ್ತಪಡಿಸಿದ್ದರು ನಂತರದಲ್ಲಿ ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ಮಾಡಿ ಹಲವರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದಿದ್ದರು.
ಈ ಕುರಿತಾಗಿ ಮೂರು ಪ್ರಕರಣಗಳನ್ನು ದಾಖಲಿಸಿಕೊಂಡು ಸುಮಾರು 20 ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು.
ಈ ನಡುವೆ ಝಕರಿಯ ಮತ್ತು ಮುಸ್ತಫ ರವರ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಪುತ್ತೂರು ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶ ಮಾಡಿದೆ.
ಆರೋಪಿಗಳ ಪರವಾಗಿ ನ್ಯಾಯವಾದಿಗಳಾದ ಅಶ್ರಫ್ ಕೆ ಅಗ್ನಾಡಿ, ಅಬ್ದುಲ್ ಮಜೀದ್ ಖಾನ್ ಮತ್ತು ಅಬ್ದುಲ್ ರಹಿಮಾನ್ ಹಿರೇಬಂಡಾಡಿ ವಾದಿಸಿದ್ದರು.




