ಸಿಮೆಂಟ್ ಚಾವಣಿ ಕುಸಿದು ಕಡಬ ಮೂಲದ ಕಾರ್ಮಿಕ ಸಾವು
ಬೆಳ್ತಂಗಡಿ: ಪುಂಜಾಲಕಟ್ಟೆ–ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯ ಭಾಗವಾಗಿ ಬೆಳ್ತಂಗಡಿ ನಗರದಲ್ಲಿ ನಡೆಯುತ್ತಿದ್ದ ಕಟ್ಟಡ ತೆರವು ಕಾರ್ಯಾಚರಣೆ ವೇಳೆ ಮೇಲ್ಭಾಗದ ಸಿಮೆಂಟ್ ಚಾವಣಿ ಕುಸಿದುಬಿದ್ದು ಕಾರ್ಮಿಕನೊಬ್ಬ ದುರಂತವಾಗಿ ಮೃತಪಟ್ಟ ಘಟನೆ ಗುರುವಾರ ಸಂಭವಿಸಿದೆ.
ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಆಲಿ ಎಂಬವರ ಪುತ್ರ ಝುಬೈರ್ (22) ಮೃತಪಟ್ಟ ಯುವ ಕಾರ್ಮಿಕ.
ಬೆಳ್ತಂಗಡಿ ನಗರದ ಮೂರು ಮಾರ್ಗದ ಸಮೀಪದಲ್ಲಿರುವ ಬೆಳ್ತಂಗಡಿ ಮಹಿಳಾ ಗ್ರಾಹಕರ ಸಹಕಾರಿ ಸಂಘಕ್ಕೆ ಸೇರಿದ ಮಳಿಗೆಯ ಕಟ್ಟಡವನ್ನು ಹೆದ್ದಾರಿ ಅಗಲೀಕರಣಕ್ಕಾಗಿ ತೆರವುಗೊಳಿಸಲಾಗುತ್ತಿತ್ತು. ಈ ವೇಳೆ ಕಟ್ಟಡದ ಮೇಲ್ಭಾಗದಲ್ಲಿ ರಾಡ್ ಹಾಗೂ ಸಿಮೆಂಟ್ ತೆರವುಗೊಳಿಸುವ ಕಾರ್ಯ ಮತ್ತು ಕೆಳಭಾಗದ ಕಾಮಗಾರಿ ಒಂದೇ ಸಮಯದಲ್ಲಿ ನಡೆಯುತ್ತಿತ್ತು. ಕೆಳಭಾಗದಲ್ಲಿ ಝುಬೈರ್ ಕೆಲಸ ಮಾಡುತ್ತಿದ್ದಾಗ, ದಿಢೀರನೆ ಕಟ್ಟಡದ ಮೇಲ್ಭಾಗ ಕುಸಿದು ಆತನ ಮೇಲೆ ಬಿದ್ದಿದೆ.
ಪರಿಣಾಮ ಗಂಭೀರವಾಗಿ ಗಾಯಗೊಂಡ ಆತನನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






