ಪತ್ನಿಯನ್ನು ಕಡಿದು ಕೊಂದ ಪತಿ:
ಮಗನ ಎದುರೇ ದಾಳಿ
ಕೊಲ್ಲಂ: ಕಡಕ್ಕಲ್ ನಲ್ಲಿ ಪತಿ ಪತ್ನಿಯನ್ನು ಕಡಿದು ಕೊಂದ ಘಟನೆ ನಡೆದಿದೆ. ಕಡಕ್ಕಲ್ ಕೋಟ್ಟಪುರದ ಲತಾ ಮಂದಿರದಲ್ಲಿ ಜಿನ್ಸಿ ಶವವಾಗಿ ಪತ್ತೆಯಾಗಿದ್ದಾರೆ. ಜಿನ್ಸಿ ಪತಿ ದೀಪು ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಏಳು ವರ್ಷದ ಮಗ ನೋಡುತ್ತಿರುವಾಗಲೇ ಜಿನ್ಸಿಯನ್ನು ದೀಪು ಕೊಂದಿದ್ದಾನೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದಂಪತಿ ಒಂದು ತಿಂಗಳಿನಿಂದ ದೂರವಾಗಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ.
ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಸಂಜೆ ಜಿನ್ಸಿ ಮನೆಗೆ ಆಗಮಿಸಿದ ದೀಪು ಆಕೆಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಜಿನ್ಸಿ ತಲೆಗೆ ಮಚ್ಚಿನಿಂದ ಬಲವಾದ ಏಟು ತಗುಲಿದೆ. ಹಲ್ಲೆ ತಡೆಯಲು ಮುಂದಾದ ಮಗನ ಮೇಲೂ ದೀಪು ಹಲ್ಲೆ ನಡೆಸಿದ್ದಾನೆ. ನಂತರ ಬಾಲಕ ಸಮೀಪದ ಅಂಗಡಿಗೆ ಓಡಿ ಹೋಗಿ ಸ್ಥಳೀಯರಿಗೆ ಮಾಹಿತಿ ನೀಡಿದ್ದಾನೆ.
ಜಿನ್ಸಿಗೆ 25 ಕ್ಕೂ ಹೆಚ್ಚು ಏಟು ತಗುಲಿದ್ದು, ಆಕೆಯನ್ನು ಕಡಕ್ಕಲ್ ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಹಲ್ಲೆ ಬಳಿಕ ಬೈಕ್ ನಲ್ಲಿ ಪರಾರಿಯಾಗಿದ್ದ ದೀಪು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಜಿನ್ಸಿ ಪಾರಿಪಳ್ಳಿಯ ಖಾಸಗಿ ಗೋಡಂಬಿ ಕಾರ್ಖಾನೆಯ ಮೇಲ್ವಿಚಾರಕಿಯಾಗಿದ್ದರು. ಇಬ್ಬರ ನಡುವೆ ಕೌಟುಂಬಿಕ ಸಮಸ್ಯೆಗಳಿದ್ದವು. ಇದೇ ದಾಳಿಗೆ ಕಾರಣವಾಗಿರಬಹುದು ಎಂದು ಭಾವಿಸಲಾಗಿದೆ. ಜಿನ್ಸಿ ಮತ್ತು ದೀಪು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಒಂದು ಮಗು ಜಿನ್ಸಿ ಜೊತೆಯಲ್ಲಿದ್ದು, ಇನ್ನೊಂದು ಮಗು ದೀಪುವಿನ ಮನೆಯಲ್ಲಿ ವಾಸವಾಗಿತ್ತು.




