ಮೂಡುಬಿದಿರೆ ವಾರದ ಸಂತೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ
ಮೂಡುಬಿದಿರೆ: ಕಲಬೆರಕೆ ಹಾಗೂ ರಾಸಾಯನಿಕ ಬಳಕೆಯ ಆರೋಪಗಳ ಹಿನ್ನೆಲೆಯಲ್ಲಿ ಮೂಡುಬಿದಿರೆಯ ವಾರದ ಸಂತೆಯಲ್ಲಿ ಆರೋಗ್ಯ ಇಲಾಖೆ, ಪುರಸಭೆ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ವಿವಿಧ ಆಹಾರ ವಸ್ತುಗಳ ಮಾದರಿ ಸಂಗ್ರಹಿಸಿದರು.
ಅಧಿಕಾರಿಗಳು ಸಂತೆ ಪ್ರದೇಶದಲ್ಲಿನ ತರಕಾರಿ, ಹಣ್ಣು-ಹಂಪಲು ಮಾರಾಟ ಮಳಿಗೆಗಳು ಹಾಗೂ ಫಾಸ್ಟ್ಫುಡ್ ಕೇಂದ್ರಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಆಹಾರ ವಸ್ತುಗಳ ಸ್ವಚ್ಛತೆ ಮತ್ತು ಆಹಾರ ಸುರಕ್ಷತೆಯ ಕುರಿತು ಪರಿಶೀಲನೆ ನಡೆಸಿ, ಕೆಲವೆಡೆ ಮಾದರಿಗಳನ್ನು ಸಂಗ್ರಹಿಸಲಾಯಿತು.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿ ಡಾ. ಪ್ರವೀಣ್, ಪುರಸಭೆ ಆರೋಗ್ಯ ನಿರೀಕ್ಷಕಿ ಶಶಿರೇಖಾ, ಆರೋಗ್ಯ ನಿರೀಕ್ಷಕ ಖಾದರ್ ಸಾಬ್ ನದಾಫ್ ಆಹಾರ ಸುರಕ್ಷತಾ ಅಧಿಕಾರಿ ಗಿರೀಶ್, ಆರೋಗ್ಯ ನಿರೀಕ್ಷಣಾ ಅಧಿಕಾರಿ ನಟರಾಜ್, ಪುರಸಭೆ ಕಮ್ಯುನಿಟಿ ಮೊಬಿಲೈಸರ್ ಅಮಿತಾ
ಮತ್ತಿತರರು ಉಪಸ್ಥಿತರಿದ್ದರು.





