May 13, 2026

ಕಾಸರಗೋಡು: ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ, ವಿದ್ಯುತ್ ಕಂಬ

0
image_editor_output_image-538509115-1778652125049.jpg

ಕಾಸರಗೋಡು: ದಿಢೀರ್ ಬೀಸಿದ ಬೇಸಿಗೆಯ ಅಕಾಲಿಕ ಗಾಳಿ ಮಳೆಗೆ ಮರವೊಂದು ಮುರಿದು ವಿದ್ಯುತ್ ಕಂಬ ಸಹಿತ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದಿದ್ದು, ಕಾರು ಚಲಾಯಿಸುತ್ತಿದ್ದ ಪೆರ್ಲದ ವೈದ್ಯರೋರ್ವರು ಅದೃಷ್ಠವಶಾತ್ ಭಾರೀ ಅಪಾಯದಿಂದ ಪಾರಾದ ಘಟನೆ ಮಂಗಳವಾರ ಸಂಜೆ ಬಾಡೂರು-ಪೆರ್ಲ ರಸ್ತೆಯ ಮಣಿಯಂಪಾರೆ ಮಸೀದಿ ಬಳಿ ಸಂಭವಿಸಿದೆ.

ಸಂತ್ರಸ್ತ ವೈದ್ಯರು ಸೀತಾಂಗೋಳಿ ಹಾಗೂ ಬಾಡೂರುಪದವಿನಲ್ಲಿ ಕ್ಲಿನಿಕ್ ನಡೆಸುತ್ತಿದ್ದಾರೆ.

ಮಂಗಳವಾರ ಸಂಜೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅವರು ತಮ್ಮ ಕ್ಲಿನಿಕ್ ಅನ್ನು ಬೇಗನೇ ಮುಚ್ಚಿ ಮನೆಗೆ ಮರಳುತ್ತಿದ್ದರು. ಅವರು ಬಾಡೂರು-ಪೆರ್ಲ ರಸ್ತೆಯಲ್ಲಿ ಚಲಿಸುತ್ತಿದ್ದಾಗ, ಭೀಕರ ಗಾಳಿಗೆ ಬೃಹತ್ ಮರವೊಂದು ಬೇರು ಸಮೇತ ಅವರ ಕಾರಿನ ಮೇಲೆ ಉರುಳಿ ಬಿದ್ದಿದೆ. ಮರದ ಜೊತೆಗೆ ಪಕ್ಕದಲ್ಲಿದ್ದ ವಿದ್ಯುತ್ ಕಂಬವೂ ಕಾರಿನ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಈ ಅಪಘಾತದಲ್ಲಿ ವೈದ್ಯರು ಯಾವುದೇ ಗಂಭೀರ ಗಾಯಗಳಿಲ್ಲದೆ ಪಾರಾಗಿದ್ದು, ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.

ಮರ ಮತ್ತು ಕಂಬ ಬಿದ್ದ ರಭಸಕ್ಕೆ ವಿದ್ಯುತ್ ತಂತಿಗಳು ತುಂಡಾಗಿ ರಸ್ತೆಯುದ್ದಕ್ಕೂ ಹರಡಿಕೊಂಡಿದ್ದವು. ಇದರಿಂದ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿದ ಸ್ಥಳೀಯ ನಿವಾಸಿಗಳು ಸಕಾಲಿಕ ಕಾರ್ಯಚರಣೆ ನಡೆಸಿದ್ದಾರೆ. ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!